‘ಸಂಸ್ಕೃತ ಭಾಷೆ ಗಂಗಾ ನದಿಯಂತೆ ಪವಿತ್ರವಾದುದು. ಸ್ವಯಂ ಪವಿತ್ರವಾಗಿದ್ದುಕೊಂಡು, ಈ ಭಾಷೆಯನ್ನಾಡುವ ಎಲ್ಲರನ್ನೂ ಪವಿತ್ರಗೊಳಿಸುತ್ತದೆ’ ಎಂಬ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆ ಸರಿಯಲ್ಲ.
ಜಗತ್ತಿನಲ್ಲಿ ಈಗ ಬಳಕೆಯಲ್ಲಿರುವ ಸುಮಾರು ಆರು ಸಾವಿರ ಭಾಷೆಗಳಲ್ಲಿ ಯಾವುದೇ ಭಾಷೆಯೂ ಮತ್ತೊಂದು ಭಾಷೆಗಿಂತ ಮೇಲು ಅಥವಾ ಕೀಳಲ್ಲ. ಆಯಾ ಮಾತಿನ ಸಮುದಾಯದ ಅಗತ್ಯಕ್ಕೆ ತಕ್ಕಂತೆ ಪ್ರತಿ ಭಾಷೆಯಲ್ಲಿನ ನುಡಿಸಾಮಗ್ರಿಗಳು ರಚನೆಗೊಂಡು ಬಳಕೆಯಾಗುತ್ತಿರುತ್ತವೆ.
ಧಾರ್ಮಿಕ ಮತ್ತು ಸಾಮಾಜಿಕ ನೆಲೆಯಲ್ಲಿ, ಜಾತಿ-ಮತಗಳ ಹೆಸರಿನಲ್ಲಿ ಜನಸಮುದಾಯದ ಮನದಲ್ಲಿ ಪರಸ್ಪರ ಹಗೆತನ- ಅಪನಂಬಿಕೆ- ಆತಂಕಗಳನ್ನು ಉಂಟುಮಾಡಿ, ಶೋಷಣೆ ಮುಂದುವರಿಸಿಕೊಂಡು ಸಮಾಜ ಮೇಲು-ಕೀಳು, ಪವಿತ್ರ-ಅಪವಿತ್ರ ಎಂಬ ಪದಗಳನ್ನು ರೂಪಿಸಿದೆ. ಈ ಪದಗಳು ಭಾಷೆಗಳಿಗೆ ಅನ್ವಯಿಸುವುದಿಲ್ಲ.