ಬೆಂಗಳೂರು: ನಟ ಶಿವರಾಜಕುಮಾರ್ ಅವರ ಆರೋಗ್ಯದಲ್ಲಿ ಮಂಗಳವಾರ ಬೆಳಿಗ್ಗೆ ಏರುಪೇರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬೆಳಿಗ್ಗೆ ಜಿಮ್ನಿಂದ ವ್ಯಾಯಾಮ ಮುಗಿಸಿಕೊಂಡು ಬಂದ ಶಿವರಾಜಕುಮಾರ್ ಅವರ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿತು.
ಕೂಡಲೇ ಅವರನ್ನು ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಈ ವೇಳೆ ಹೃದಯಬಡಿತದಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ಅವರನ್ನು ತುರ್ತು ನಿಗಾಘಟಕದಲ್ಲಿರಿಸಿ ಎಲೆಕ್ಟ್ರೋಕಾರ್ಡಿಯೊಗ್ರಾಂ (ಇಸಿಜಿ) ಸೇರಿದಂತೆ ಹಲವು ಹೃದಯ ಸಂಬಂಧಿ ಪರೀಕ್ಷೆಗಳನ್ನು ನಡೆಸಲಾಗಿದೆ. ‘ಶಿವರಾಜಕುಮಾರ್ ಆರೋಗ್ಯ ಸುಧಾರಿಸಿದೆ. ಗಾಬರಿ ಪಡುವ ಅವಶ್ಯಕತೆ ಇಲ್ಲ. ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ’ ಎಂದು ಕುಟುಂಬ ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಿ.ಎಂ ಭೇಟಿ: ಸಂಜೆಯ ಹೊತ್ತಿಗೆ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಜಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಆಸ್ಪತ್ರೆ ಮುಂದೆ ಜಮಾಯಿಸಿದ ಅಭಿಮಾನಿಗಳು: ವಿಷಯ ತಿಳಿಯುತ್ತಿ ದ್ದಂತೆ ಶಿವರಾಜ ಕುಮಾರ್ ಅವರ ಅಭಿ ಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರ ಸಾಹಸ ಪಡಬೇಕಾಯಿತು.
‘ಶೀಘ್ರ ಸುಧಾರಿಸಿಕೊಳ್ಳುತ್ತೇನೆ’: ಚಿಕಿತ್ಸೆ ಪಡೆದ ಬಳಿಕ, ಮಧ್ಯಾಹ್ನದ ಹೊತ್ತಿಗೆ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಪತ್ನಿ ಜತೆ ಕಾಣಿಸಿಕೊಂಡ ಶಿವ ರಾಜ ಕುಮಾರ್ ಅವರು, ಆಸ್ಪತ್ರೆ ಎದುರು ಜಮಾಯಿಸಿದ ಅಭಿಮಾನಿ ಗಳತ್ತ ಕೈ ಬೀಸಿ, ‘ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ಶೀಘ್ರ ಸುಧಾರಿಸಿಕೊಳ್ಳಲಿದ್ದೇನೆ’ ಎಂದರು. ಬಳಿಕ ಅಭಿಮಾನಿಗಳು ನಿಧಾನವಾಗಿ ಆಸ್ಪತ್ರೆ ಆವರಣದಿಂದ ನಿರ್ಗಮಿಸಿದರು.