ಕೊಲಂಬೊ (ಪಿಟಿಐ): ಭಾರತೀಯ ಮೂಲದ ತೋಟಗಾರಿಕೆ ಕಾರ್ಮಿಕರೇ ಹೆಚ್ಚಾಗಿ ವಾಸಿಸಿರುವ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ದೊಡ್ಡ ಪ್ರಮಾಣದ ಭೂಕುಸಿತದಲ್ಲಿ ಸುಮಾರು 200 ಜನರು ಸಜೀವ ಸಮಾಧಿ ಆಗಿರಬಹುದು ಶಂಕಿಸಲಾಗಿದೆ.
ಸೇನೆಯ ಯೋಧರು ಭಾರಿ ಗಾತ್ರದ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೇಂದ್ರ ಬದುಲ್ಲಾ ಜಿಲ್ಲೆಯ ಮೀರಿಬೆಡ್ಡಾ ಚಹಾ ತೋಟದಲ್ಲಿ ಮಳೆಯಿಂದ ಉಂಟಾದ ಭೂಕುಸಿತದಿಂದ 120 ಮನೆಗಳು ನೆಲಸಮವಾಗಿವೆ. ಈ ಪ್ರದೇಶದಲ್ಲಿ 192 ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಾಯಕ ನಿರ್ದೇಶಕ ಪ್ರದೀಪ್ ಕೊಡಿಪ್ಪಿಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ 817 ನಿರ್ವಸತಿಗರಿಗೆ ಎರಡು ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರು ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮತ್ತು ಸೇನೆಯ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.