ಖಂಡ್ವಾ, ಮಧ್ಯಪ್ರದೇಶ (ಪಿಟಿಐ): ಉದ್ದೇಶಿತ ಭೂ ಸ್ವಾಧೀನ ಮಸೂದೆಯು ರೈತ ವಿರೋಧಿಯಲ್ಲ ಎಂದು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿ ಮಸೂದೆ ಅನುಮೋದನೆಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಶ್ರೀ ಸಿಂಗಾಜಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ 600 ಮೆಗಾ ವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಶಾಲೆಗಳು, ಆಸ್ಪತ್ರೆಗಳು, ಮನೆಗಳು ಹಾಗೂ ನೀರಾವರಿ ಯೋಜನೆಗಳಿಗೆ ಭೂಮಿ ಹಂಚಿಕೆ ಮಾಡಲು ಹಿಂದಿನ ಸರ್ಕಾರ ತಂದಿರುವ ಭೂ ಸ್ವಾಧೀನ ಕಾಯ್ದೆಯಲ್ಲಿ ಅವಕಾಶಗಳಿಲ್ಲ. ಇವೆಲ್ಲವೂ ನಿಮಗೆ ಬೇಕೋ ಅಥವಾ ಬೇಡವೋ' ಎಂದು ಪ್ರಶ್ನಿಸಿದರು.
660 ಮೆಗಾ ವಾಟ್ ಸಾಮರ್ಥ್ಯದ ಎರಡು ಘಟಕಗಳಿಗೆ ಶಂಕು ಸ್ಥಾಪನೆಯನ್ನೂ ನೆರವೇರಿಸಿದ ಮೋದಿ, ‘ನಾನು ರೈತರ ವಿರೋಧಿಯಲ್ಲ. ರೈತರನ್ನು ಎಂದಿಗೂ ವಿರೋಧಿಸುವುದಿಲ್ಲ. ಮಸೂದೆಯಲ್ಲಿ ಏನು ಸುಧಾರಣೆ ತರಬೇಕು ಹೇಳಿ ಎಂದು ನಾನು ವಿರೋಧ ಪಕ್ಷಗಳನ್ನು ಕೇಳುತ್ತೇನೆ. ಆದರೆ ಅವರು ಏನೂ ಹೇಳುವುದಿಲ್ಲ’ ಎಂದು ಆರೋಪಿಸಿದರು.
ಬಡ ಜನತೆಗೆ ಶಾಲೆಗಳು, ರಸ್ತೆಗಳು, ಮನೆಗಳು, ನೀರು, ವಿದ್ಯುತ್ ಹಾಗೂ ನೀರಾವರಿ ಸೌಲಭ್ಯಗಳ ಅಗತ್ಯವಿದೆ ಎಂದ ಅವರು, ‘ಹಿಂದಿನ ಸರ್ಕಾರ ಜಾರಿಗೊಳಿಸಿರುವ ಕಾಯ್ದೆ, ನೀರು ಹಾಗೂ ನೀರಾವರಿ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅವಕಾಶ ನೀಡುವುದಿಲ್ಲ’ ಎಂದು ಟೀಕಿಸಿದರು.
‘ಬಜೆಟ್ನಲ್ಲಿ ರೈತರು, ಬುಡಕಟ್ಟು ಸಮುದಾಯ ಹಾಗೂ ದತಲಿ ಸಹೋದರ–ಸಹೋದರಿಯರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ’ ಎಂದೂ ಅವರು ಪ್ರತಿಪಾದಿಸಿದರು.
ಉದ್ದೇಶಿತ ಭೂ ಸ್ವಾಧೀನ ಸುಗ್ರೀವಾಜ್ಞೆಗೆ ಪ್ರಸಕ್ತ ಅಧಿವೇಶನದಲ್ಲಿ ಕಾಯ್ದೆ ರೂಪ ನೀಡುವುದು ಸರ್ಕಾರದ ಉದ್ದೇಶ. ಆದರೆ ಎನ್ಡಿಎ ಮೈತ್ರಿ ಕೂಟದಲ್ಲಿರುವ ಕೆಲ ಪಕ್ಷಗಳೂ ಸೇರಿದಂತೆ ಪ್ರತಿಪಕ್ಷಗಳಿಂದ ಉದ್ದೇಶಿತ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿ ಕೂಟವು ಬಹುಮತದ ಕೊರತೆ ಎದುರಿಸುತ್ತಿದೆ.