ತನ್ನ ಹಿಂಬಾಲಕರಿಗೆ ಸೀಟು ಕೊಡಲಿಲ್ಲ ಎಂಬ ಸಿಟ್ಟಿನಿಂದ ಕಾನೂನು ಮಂತ್ರಿ ಕಾಲೇಜಿನಲ್ಲಿ ಗಲಭೆ ಎಬ್ಬಿಸುತ್ತಾನೆ. ಆ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ಬಲಿಯಾಗುತ್ತಾನೆ. ಆತನ ತಾಯಿಯ ಆಕ್ರಂದನ ಕೇಳಿ ಆಕ್ರೋಶಗೊಳ್ಳುವ ಲೋಹಿತ್ ಎನ್ನುವ ತರುಣ, ಮಂತ್ರಿಯ ತಮ್ಮನನ್ನು ಒಂದೆಡೆ ರಹಸ್ಯವಾಗಿ ಕೂಡಿಹಾಕುತ್ತಾನೆ.
ಮಂತ್ರಿಯ ಕೆಟ್ಟ ಕೆಲಸಗಳು ಜನರಿಗೆ ಗೊತ್ತಾಗುವುದರಿಂದ, ಆತ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ತಮ್ಮನ್ನು ಈ ಸ್ಥಿತಿಗೆ ತಂದಿದ್ದು ಲೋಹಿತ್ ಎಂದು ಗೊತ್ತಾದಾಗ, ಆತನನ್ನು ಮುಗಿಸಲು ಮಂತ್ರಿ ಹಾಗೂ ಆತನ ತಮ್ಮ ಸಂಚು ಹೂಡುತ್ತಾರೆ. ಅದರಲ್ಲಿ ಅವರು ಯಶಸ್ವಿಯಾಗುತ್ತಾರೆಯೇ? ಲೋಹಿತ್ ತನ್ನ ಗುರಿ ಮುಟ್ಟುತ್ತಾನೆಯೇ? ಇದಕ್ಕೆಲ್ಲ ಕ್ಲೈಮ್ಯಾಕ್ಸ್ನಲ್ಲಿ ಉತ್ತರ ಸಿಗುತ್ತದೆ.
ರಾಜಕಾರಣ – ಪೊಲೀಸ್ ಇಲಾಖೆಯ ಭ್ರಷ್ಟಾಚಾರ, ಅದರಿಂದ ಜನಸಾಮಾನ್ಯರು ಎದುರಿಸುವ ಸಮಸ್ಯೆಗಳನ್ನು ನಿರ್ದೇಶಕ ಸರವಣನ್ ‘ಚಕ್ರವ್ಯೂಹ’ದಲ್ಲಿ ಬಿಂಬಿಸಿದ್ದಾರೆ. ಪುನೀತ್ ರಾಜಕುಮಾರ್, ರಚಿತಾ ರಾಮ್, ಅಭಿಮನ್ಯು ಸಿಂಗ್, ಅರುಣ್ ವಿಜಯ್, ಸಾಧು ಕೋಕಿಲಾ ತಾರಾಗಣದಲ್ಲಿ ಇರುವ ಪ್ರಮುಖರು. ಷಣ್ಮುಗ ಸುಂದರಂ ಛಾಯಾಗ್ರಹಣ ಹಾಗೂ ಎಸ್.ಎಸ್. ತಮನ್ ಸಂಗೀತ ಚಿತ್ರಕ್ಕಿದೆ.