ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಪಕ್ಷಿಧಾಮದ ಬಳಿ ತುಂಗಾನದಿ ಉಕ್ಕಿ ಹರಿಯುತ್ತಿದ್ದು, ನದಿಯ ನಡುಗಡ್ಡೆಯ ಕೆಳ ಸ್ತರದಲ್ಲಿ ಸೈಬೀರಿಯಾದ ವಲಸೆ ಹಕ್ಕಿಗಳು ಕಟ್ಟಿದ್ದ ಸಾವಿರಾರು ಗೂಡುಗಳು ಕೊಚ್ಚಿಕೊಂಡುಹೋಗಿವೆ.
ಪ್ರತಿ ವರ್ಷ ಇಲ್ಲಿಗೆ ದೂರದ ಸೈಬೀರಿಯಾದಿಂದ 5 ಸಾವಿರಕ್ಕೂ ಹೆಚ್ಚು ಹಕ್ಕಿಗಳು ವಲಸೆ ಬಂದು ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ.
ಬೆಳಕ್ಕಿ, ಹಾವಕ್ಕಿ, ನೀರು ಕಾಗೆಗಳು ಇಲ್ಲಿ ಬೀಡುಬಿಟ್ಟಿದ್ದು, ನಡುಗಡೆಯ ಮೇಲೆ ಒಂದೂವರೆ ಅಡಿಯವರೆಗೆ ನೀರು ಹರಿಯುತ್ತಿರುವ ಕಾರಣ ಗೂಡುಗಳು ನೀರಿನಲ್ಲಿ ತೇಲಿ ಹೋಗಿವೆ.
ನಡುಗಡ್ಡೆ ಸುತ್ತ ತಡೆಗೋಡೆ ಕಟ್ಟುವಂತೆ ಪಕ್ಷಿ ತಜ್ಞರು, ಪರಿಸರ ಪ್ರಿಯರ ಮನವಿಗೆ ಅರಣ್ಯ ಇಲಾಖೆ, ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಸ್ಪಂದಿಸದ ಕಾರಣ ಪ್ರತಿ ವರ್ಷದ ಮಳೆಗಾಲದಲ್ಲೂ ಹಕ್ಕಿಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.