ನವದೆಹಲಿ (ಪಿಟಿಐ): ಮತಾಂತರದ ಮೇಲಿನ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕೆಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಸರ್ಕಾರ ಮಣಿಯದ ಕಾರಣ ಸತತ ನಾಲ್ಕನೇ ದಿನವಾದ ಗುರುವಾರವೂ ರಾಜ್ಯಸಭೆ ಯಾವುದೇ ಕಲಾಪ ನಡೆಸಲು ವಿಫಲವಾಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನಿ ಸದನದಲ್ಲಿದ್ದರೂ, ದೇಶದಲ್ಲಿನ ಕೋಮು ಗಲಭೆಗಳ ಮೇಲೆ ಚರ್ಚಿಸಬೇಕಾದ ವಿಧಾನದ ಬಗ್ಗೆ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ವಾಗ್ವಾದ ನಡೆದು, ಕಲಾಪದ ಸಮಯವನ್ನು ನುಂಗಿಹಾಕಿತು.
ಸಭಾ ನಾಯಕರಾದ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ, ಮತಾಂತರ ಬಗ್ಗೆ ಸರ್ಕಾರ ತಕ್ಷಣದ ಚರ್ಚೆಗೆ ಸಿದ್ಧವಿದ್ದು, ಆದರೆ ಸರ್ಕಾರದ ಕಡೆಯಿಂದ ಯಾರು ಉತ್ತರಿಸಬೇಕೆಂದು ಪ್ರತಿಪಕ್ಷಗಳ ಸದಸ್ಯರು ಷರತ್ತು ಹಾಕುವಂತಿಲ್ಲ ಎಂದು ಹೇಳಿದರು.
ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು, ಈ ಬಗ್ಗೆ ಪ್ರಧಾನಿ ಉತ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕಿ, ಗೃಹ ಸಚಿವರೇ ತಮ್ಮ ಇಲಾಖೆಗೆ ಸಂಬಂಧಿಸಿದ ಈ ವಿಷಯದಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ಸಿಪಿಎಂನ ಸೀತಾರಾಂ ಯೆಚೂರಿ, ಕಾಂಗ್ರೆಸ್ನ ಆನಂದ ಶರ್ಮಾ, ಜೆಡಿಯುನ ಕೆ.ಸಿ. ತ್ಯಾಗಿ ಮತ್ತಿತರರು ಪ್ರಧಾನಿ ಉತ್ತರಕ್ಕೆ ಪಟ್ಟು ಹಿಡಿದರು. ಕಾಂಗ್ರೆಸ್ನ ಪಿ. ರಾಜೀವ್ ನಿಲುವಳಿ ಮಂಡಿಸಿದರು. ಸಂಸದೀಯ ವ್ಯವಹಾರ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ವಿರೋಧಿ ಸದಸ್ಯರು ಚರ್ಚೆ ಆರಂಭಿಸಿದರೆ ಸರ್ಕಾರ ಉತ್ತರಿಸಲಿದ್ದು, ಆದರೆ ಒತ್ತಡ ಹೇರಬಾರದೆಂದು ತಿಳಿಸಿದರು.
ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಪತಿ ಪಿ.ಜೆ. ಕುರಿಯನ್ ಅವರು, ಚರ್ಚೆ ಆರಂಭಿಸಲು ಸಚಿವರು ಅಥವಾ ಪ್ರಧಾನಿ ಇರಲೇಬೇಕೆಂದು ಪ್ರತಿಪಕ್ಷಗಳು ಷರತ್ತು ವಿಧಿಸುವಂತಿಲ್ಲ ಮತ್ತು ಉತ್ತರಿಸಲು ಸಚಿವರೇ ಸಾಕು ಹಾಗೂ ಚರ್ಚೆ ಆರಂಭಿಸಿದ ನಂತರ ಪ್ರಧಾನಿ ಹಾಜರಿಗೆ ಕೇಳಬಹುದು ಎಂದು ಸ್ಪಷ್ಟಪಡಿಸಿದರು.
ಹಿಂದೂ ಧರ್ಮಕ್ಕೆ ವಾಪಸ್
ಪಟ್ನಾ(ಐಎಎನ್ಎಸ್): ಬಿಹಾರದ ಗ್ರಾಮಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 12 ಜನರಲ್ಲಿ ಮೂವರು ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ಹಿಂದೂ ಧರ್ಮಕ್ಕೆ ವಾಪಸಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.