ಬೆಂಗಳೂರು: ರಾಜಧಾನಿಯಲ್ಲಿ ಸರಗಳ್ಳರ ಅಟ್ಟಹಾಸ ಮಂಗಳವಾರವೂ ಮುಂದುವರೆದಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬನಶಂಕರಿ, ಚಂದ್ರಾಲೇಔಟ್, ವಿಜಯನಗರ ಹಾಗೂ ಜ್ಞಾನಭಾರತಿಯಲ್ಲಿ ನಾಲ್ವರು ವೃದ್ಧೆಯರಿಂದ ಚಿನ್ನದ ಸರ ಕಿತ್ತಿದ್ದಾರೆ.
ಬೆಳಿಗ್ಗೆ 6.05ರಿಂದ ಮಧ್ಯಾಹ್ನ 12.15ರ ಅವಧಿಯಲ್ಲಿ ಈ ಸರಗಳ್ಳತನ ಪ್ರಕರಣಗಳು ನಡೆದಿವೆ.
ಎರಡು ತಂಡಗಳ ಕೃತ್ಯ: ಚಂದ್ರಾಲೇಔಟ್, ವಿಜಯನಗರ, ಜ್ಞಾನಭಾರತಿಯಲ್ಲಿ ಸರಗಳ್ಳತನ ಮಾಡಿರುವುದು ಒಂದೇ ತಂಡದ ಇಬ್ಬರು ಸದಸ್ಯರು. ಬನಶಂಕರಿಯಲ್ಲಿ ಸರ ಕಿತ್ತದ್ದು ಮತ್ತೊಂದು ತಂಡ. ಘಟನಾ ಸ್ಥಳಗಳಿಗೆ ಸಮೀಪವಿರುವ ಜಂಕ್ಷನ್ಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಜತೆಗೆ ನಗರ ಪೊಲೀಸ್ ಕಮಿಷನರ್ ಎಂ.ಎನ್. ರೆಡ್ಡಿ ಅವರ ಆದೇಶದಂತೆ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೈಕ್ ಬಿಟ್ಟು ಪರಾರಿ: ‘ಮೈಸೂರು ರಸ್ತೆ ಮಾರ್ಗವಾಗಿ ಕಪ್ಪು ಬಣ್ಣದ ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ಯುವಕರು, ಕೆಂಗೇರಿ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಆ ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.