ತಮಿಳು ಚಿತ್ರರಂಗದ ಸುದ್ದಿ ಮೂಲವನ್ನು ನಂಬುವುದಾದರೆ, ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ಸ್ಟಾರ್ ನಿರ್ದೇಶಕ ಎಸ್.ಶಂಕರ್ ಅವರ ಕಾಂಬಿನೇಷನ್ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಪ್ರಾಜೆಕ್ಟ್ನಲ್ಲಿ ಇಬ್ಬರು ದಿಗ್ಗಜರು ಒಟ್ಟಾಗಿ ಕೆಲಸ ಮಾಡಿದರೆ ಮತ್ತೊಂದು ಅದ್ಭುತ ಚಿತ್ರ ತಯಾರಾಗಲಿದೆ ಎಂಬುದು ಸಿನಿಪ್ರಿಯರ ನಿರೀಕ್ಷೆ.
ಬಲ್ಲ ಮೂಲಗಳ ಪ್ರಕಾರ, ಇನ್ನೂ ಹೆಸರಿಡದ ಚಿತ್ರದಲ್ಲಿ ರಜನಿ ಹಾಗೂ ಶಂಕರ್ ಮೂರನೇ ಬಾರಿ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ. ಈ ಪ್ರಾಜೆಕ್ಟ್ ಸದ್ಯಕ್ಕೆ ಮಾತುಕತೆಯ ಹಂತದಲ್ಲಿದೆ. ಈಚೆಗೆ ತೆರೆಕಂಡ ಬ್ಲಾಕ್ಬಸ್ಟರ್ ಸಿನಿಮಾ ‘ಕತ್ತಿ’ ಚಿತ್ರದ ನಿರ್ಮಾಪಕರೇ ಈ ಚಿತ್ರಕ್ಕೆ ಹಣಹೂಡಲಿದ್ದಾರಂತೆ.
‘ಎಂದಿರನ್ 2’ ಚಿತ್ರದ ನಿರ್ಮಾಣಕ್ಕಾಗಿ ಈ ಜೋಡಿ ಒಂದಾಗುತ್ತಿದೆಯೇ ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. ಆದರೆ, ಇವರಿಬ್ಬರೂ ಕೂಡಿ ಸಿನಿಮಾ ಮಾಡಲಿದ್ದಾರೆ ಎಂಬುದು ಮಾತ್ರ ಸತ್ಯ. ‘ಕತ್ತಿ’ ಚಿತ್ರದ ನಿರ್ಮಾಪಕರೇ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ’ ಎಂಬ ಸುದ್ದಿಯೂ ಹರಿದಾಡುತ್ತಿದೆ. ಮತ್ತೊಂದು ಮೂಲದ ಪ್ರಕಾರ, ನಿರ್ದೇಶಕ ಎಸ್.ಶಂಕರ್ ಅವರು ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ಕಮಲ್ ಹಾಸನ್ ಅವರನ್ನು ಕೇಳಿಕೊಂಡಿದ್ದಾರಂತೆ.
ಆದರೆ, ಅವರು ನಟಿಸಲು ಒಪ್ಪಿಲ್ಲ. ಅದಕ್ಕೆ ಕಾರಣವನ್ನೂ ಹೇಳಿಲ್ಲ. ಈ ಸಂದರ್ಭದಲ್ಲಿ ಶಂಕರ್ ಅವರು ಕಮಲ್ ಹಾಸನ್ ಬದಲಿಗೆ ನಟ ವಿಕ್ರಮ್ ಅವರನ್ನು ಹಾಕಿಕೊಳ್ಳುವ ಯೋಚನೆಯಲ್ಲಿದ್ದಾರಂತೆ. ಅಂದಹಾಗೆ, ‘ಶಿವಾಜಿ’ ಮತ್ತು ‘ಎಂದಿರನ್’ ಚಿತ್ರಗಳಲ್ಲಿ ರಜನಿ ಹಾಗೂ ಶಂಕರ್ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.