ರತ್ಲಾಮ್ (ಮಧ್ಯಪ್ರದೇಶ), (ಪಿಟಿಐ): ಉದ್ಯೋಗ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆಯ ಆಮಿಷವೊಡ್ಡಿ ಬುಡಕಟ್ಟು ಸಮುದಾಯದವರನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಿದ ಆರೋಪದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರತ್ಲಾಮ್ ಕ್ರೈಸ್ತ ಮಂಡಳಿ ಕಾರ್ಯದರ್ಶಿ ಜೋಸ್ ಮ್ಯಾಥ್ಯೂ ಹಾಗೂ ಇನ್ನಿತರರ ವಿರುದ್ಧ ಎರಡು ದಿನಗಳ ಹಿಂದೆ ಪ್ರಕರಣ ದಾಖಲಿಸಲಾಗಿದೆ. ಮ್ಯಾಥ್ಯೂ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಠಾಣಾಧಿಕಾರಿ ರಾಜೇಶ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಬೆಂಬಲ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಮುಂದಿಟ್ಟಿರುವ ಬೇಡಿಕೆಯನ್ನು ಸೇನಾ ಸಮರ್ಥಿಸಿದೆ.
ಮತಗಳಿಕೆ ರಾಜಕೀಯ: ಬಿಜೆಪಿ ಜಯಗಳಿಸಿರುವುದಕ್ಕೆ ಚಿಂತೆಗೀಡಾಗಿರುವ ರಾಜಕೀಯ ಶಕ್ತಿಗಳು ಮತಾಂತರ ವಿಷಯವನ್ನು ಮತ ಗಳಿಕೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಚಿವ ನಿತಿನ್್ ಗಡ್ಕರಿ ಆರೋಪಿಸಿದ್ದಾರೆ.
ಪಿಎಂಕೆ ತರಾಟೆ: ಮರುಮತಾಂತರ ವಿಷಯವಾಗಿ ಹಿಂದೂಪರ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿರುವ ಎನ್ಡಿಎ ಅಂಗಪಕ್ಷ ಪಿಎಂಕೆ, ‘ದೇಶದ ಆರ್ಥಿಕ ಅಭಿವೃದ್ಧಿಗೆ ಕೆಲಸ ಮಾಡುವುದಕ್ಕಾಗಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆಯೇ ಹೊರತೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಕ್ಕಲ್ಲ’ ಎಂದಿದೆ.
ತಪ್ಪೇನಿಲ್ಲ: ಸೇನಾ
ಮುಂಬೈ : ಮರು ಮತಾಂತರದಲ್ಲಿ ಯಾವ ತಪ್ಪೂ ಇಲ್ಲ ಎಂದಿರುವ ಶಿವಸೇನಾ, ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾದಾಗ ಸುಮ್ಮನಿದ್ದವರನ್ನು ತರಾಟೆಗೆ ತೆಗೆದುಕೊಂಡಿದೆ. ‘ನಿನ್ನೆಯವರೆಗೂ ಹಿಂದುಗಳು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇವರನ್ನೆಲ್ಲ ಆಮಿಷವೊಡ್ಡಿ ಅಥವಾ ಬಲವಂತದಿಂದ ಮತಾಂತರ ಮಾಡಲಾಗಿದೆ ಎಂದು ಯಾರೂ ಹೇಳಿಲ್ಲ. ಆದರೆ ಈಗ ಹುಸಿ ಜಾತ್ಯತೀತವಾದಿಗಳು ಈ ಮತಾಂತರ ಸರಿಯಲ್ಲ ಎನ್ನುತ್ತಿದ್ದಾರೆ’ ಎಂದು ಸೇನಾ ‘ಸಾಮ್ನಾ’ದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.