ಮಾಲೂರು : ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ತಾಲ್ಲೂಕಿನ ಲಕ್ಕೂರು ಗ್ರಾಮಸ್ಥರು ಮಂಗಳವಾರ ರಾತ್ರಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೃಷಿ ಚಟುವಟಿಕೆ, ಜಾನುವಾರುಗಳಿಗೆ ನೀರು ಸಿಗದೆ ತೊಂದರೆಯಾಗಿದೆ. ಹಾಗಾಗಿ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು ಎಂದು ಗ್ರಾಮಸ್ಥರು ಹೇಳಿದರು.
ತಾಲ್ಲೂಕಿನ 50 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್, ಸ್ಥಳೀಯ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
1500 ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಇಲ್ಲಿನ ಜನರು ಪ್ಲೋರೈಡ್ಯುಕ್ತ ನೀರು ಸೇವಿಸುತ್ತಿರುವುದರಿಂದ ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ರಾಗಿ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆರಂಭದಲ್ಲಿ ಉತ್ತಮ ಮಳೆ ಬೀಳುವ ಮುನ್ಸೂಚನೆ ಇತ್ತು ನಂತರ ಮಳೆಯಿಲ್ಲದೆ ರಾಗಿ ಬಿತ್ತನೆ ಸಮರ್ಪಕವಾಗಿ ನಡೆದಿಲ್ಲ.
ಈಗಾಗಲೇ ಬಿತ್ತನೆ ಮಾಡಿರುವ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸ್ವಲ್ಪ ಚಿಗುರಿರುವ ರಾಗಿ ಪೈರು ಒಣಗುತ್ತಿದೆ. ಈ ನಿಟ್ಟಿನಲ್ಲಿ ಮಳೆರಾಯನನ್ನು ಹೊತ್ತು ವರಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.