ಔರಂಗಾಬಾದ್, ಮಹಾರಾಷ್ಟ್ರ (ಪಿಟಿಐ): ಆಲಿಕಲ್ಲು ಮಳೆಯಿಂದ ಆದ ಬೆಳೆಹಾನಿಗೆ ಬೇಸತ್ತು ಮರಾಠವಾಡ ಪ್ರಾಂತ್ಯದಲ್ಲಿ ಮತ್ತಿಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಹಾನಿಗೆ ಬೇಸತ್ತು ವಾರವೊಂದರಲ್ಲಿಯೇ ಇಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 13ಕ್ಕೆ ಏರಿದೆ.
ಪರ್ಭನಿ ಜಿಲ್ಲೆಯ ನಂದಗಾಂವ್್ ಬದ್ರುಕ್ನ 45 ವರ್ಷದ ರೈತ ನಾರಾಯಣ ಕಾಳೆ ದುಢ್ನಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ₨25,000 ಸಾಲ ಮಾಡಿದ್ದರು. ಆದರೆ, ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೀಡ್ ಜಿಲ್ಲೆಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆನಾಶವಾಗಿದೆ.
ಔರಂಗಾಬಾದ್, ಬೀಡ್, ಉಸ್ಮಾನಾಬಾದ್ ಹಾಗೂ ಹಿಂಗೋಲಿಯಲ್ಲಿ ಒಟ್ಟು 11 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಗರಿಷ್ಠ ಪರಿಹಾರದ ಭರವಸೆ
ಮುಂಬೈ ವರದಿ: ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದ ರೈತರು ಹತಾಶರಾಗಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮನವಿ ಮಾಡಿದ್ದಾರೆ.
ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದ್ದರಿಂದ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚವಾಣ್ ರೈತರಲ್ಲಿ ಈ ಮನವಿ ಮಾಡಿಕೊಂಡಿದ್ದಾರೆ.
ರೈತರಿಗೆ ಆಗಿರುವ ಅಪಾರ ಹಾನಿಯ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ ಹಾಗೂ ಐದು ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಸಿದ್ಧಪಡಿಸಿ ಕೇಂದ್ರದ ನೆರವು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೈಕೋರ್ಟ್ಗೆ ರೈತರ ಮೊರೆ
ಮುಂಬೈ ವರದಿ: ಇತ್ತೀಚಿನ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಆಗಿರುವುದರಿಂದ 20 ಸಾವಿರ ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಇಬ್ಬರು ರೈತರು ಬಾಂಬೈ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸೊಲ್ಲಾಪುರ ಜಿಲ್ಲೆಯ ಗೊರಖ್ ಆನಂದ್ ಘಾಡ್ಗೆ ಮತ್ತು ವಿಠಲ್ ರಾವ್ ಪವಾರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.