ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ ಕಾಂಗ್ರೆಸ್–ಎನ್ಸಿಪಿ ನಡುವಣ ಹದಿನೈದು ವರ್ಷಗಳ ಮೈತ್ರಿ ಮುರಿದು ಬಿದ್ದ ಬೆನ್ನಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚವಾಣ್ ಅವರು ಶುಕ್ರವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಚವಾಣ್ ಅವರಿಗೆ ಹಂಗಾಮಿ ಮುಖ್ಯ-ಮಂತ್ರಿಯಾಗಿ ಮುಂದುವರಿ-ಯು-ವುದಕ್ಕೆ ಸೂಚಿಸಲಾಗಿದೆಯೇ ಅಥವಾ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗು-ತ್ತದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಪಶ್ಚಿಮ ಮಹಾರಾಷ್ಟ್ರದ ಕರಾಡ್ ಕ್ಷೇತ್ರದಿಂದ ಚವಾಣ್ ಶನಿವಾರ ನಾಮ-ಪತ್ರ ಸಲ್ಲಿಸುವರು. ‘ಚವಾಣ್ ಎನ್ಸಿಪಿಯನ್ನು ಕಡೆಗಣಿ-ಸುತ್ತಿದ್ದಾರೆ ಹಾಗೂ ಸ್ಥಾನ ಹೊಂದಾ-ಣಿಕೆಗೆ ಸಂಬಂಧಿಸಿದ ಮಾತುಕತೆಗೆ ಆಸಕ್ತಿ ತೋರಿಸುತ್ತಿಲ್ಲ. ಆದ ಕಾರಣ ನಾವು ಕಾಂಗ್ರೆಸ್ ಸಖ್ಯ ಕಡಿದುಕೊಳ್ಳುತ್ತಿದ್ದೇವೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ತಟ್ಕರೆ ಗುರುವಾರ ಹೇಳಿದ್ದರು.
೨8೮ ಸದಸ್ಯ ಬಲದ ವಿಧನಾಸಭೆ ಚುನಾವಣೆಗೆ ಎರಡೂ ಪಕ್ಷಗಳು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎನ್ನುವುದು ಎನ್ಸಿಪಿ ಒತ್ತಾಯವಾಗಿತ್ತು. ಒಂದು ವೇಳೆ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಎರಡೂ ಪಕ್ಷಗಳು ಸಮಾನ ಅವಧಿಗೆ ಹಂಚಿಕೊಳ್ಳಬೇಕು ಎಂದೂ ಅದು ಬೇಡಿಕೆ ಮುಂದಿಟ್ಟಿತ್ತು. ಆದರೆ ಕಾಂಗ್ರೆಸ್ ಈ ಬೇಡಿಕೆಗೆ ಸೊಪ್ಪು ಹಾಕ-ದಿದ್ದುದು ಎನ್ಸಿಪಿ ಅಸಮಾಧಾನಕ್ಕೆ ಕಾರಣವಾಗಿದೆ.
ಪರಸ್ಪರ ಆರೋಪ: ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದಿದ್ದೇ ತಡ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಬಿಜೆಪಿಯನ್ನು ‘ಮಹಾರಾಷ್ಟ್ರದ ಶತ್ರು’ ಎಂದು ಸೇನಾ ಆರೋಪಿಸಿದರೆ, ‘ಎನ್ಸಿಪಿ ಬಿಜೆಪಿಗೆ ಹತ್ತಿರವಾಗುತ್ತಿದೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪಕ್ಷದ ಮುಖ-ವಾಣಿ ‘ಸಾಮ್ನಾ’-ದಲ್ಲಿ ಬರೆದ ಸಂಪಾ-ದಕೀಯದಲ್ಲಿ ‘ಮರಾಠಿ ಪರ’ ಕಾರ್ಯ-ಸೂಚಿಗೆ ಮರಳುವ ಸೂಚನೆ-ಯನ್ನು ಸೇನಾ ನೀಡಿದೆ. ಚುನಾವಣೆ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಸೇನಾ ಸಜ್ಜಾಗುತ್ತಿದೆ. ಅಮಿತ್ ಷಾ ಅವರನ್ನು ಲೇವಡಿ ಮಾಡುವ ಮರಾಠಿ ಬಿತ್ತಿಪತ್ರಗಳನ್ನು ಮುಂಬೈ ಮತ್ತು ಮಹಾ-ರಾಷ್ಟ್ರದ ವಿವಿಧೆಡೆ ಅಂಟಿಸಲಾಗಿದೆ. ‘ನಾವು ಆದಿಲ್ ಷಾ, ನಿಜಾಮ್ ಷಾ ಅವರಂಥ ದಾಳಿಕೋರರನ್ನೇ ನೋಡಿ-ದ್ದೇವೆ. ಇನ್ನು ಈ ಷಾ ಯಾವ ಲೆಕ್ಕ’ ಎಂಬ ಒಕ್ಕಣೆ ಈ ಬಿತ್ತಿಪತ್ರಗಳಲ್ಲಿ ಕಾಣಿಸುತ್ತಿದೆ.
ಕಾಂಗ್ರೆಸ್ ಆರೋಪ: ಬಿಜೆಪಿಗೆ ಹತ್ತಿರವಾಗಲು ಎನ್ಸಿಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಈ ಬೆಳವಣಿಗೆ ನಮಗೆ ಅಚ್ಚರಿ ತಂದಿಲ್ಲ. ಒಂದೆರಡು ತಿಂಗಳಿನಿಂದಲೇ ನಮಗೆ ಈ ಸೂಚನೆ ಸಿಕ್ಕಿತ್ತು. ನಾವು ಇಂತಹ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೆವು. ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ’ ಎಂದು ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಅಜಯ್್ ಮಾಕನ್್ ಸುದ್ದಿಗಾರರ ಬಳಿ ಹೇಳಿದರು.
ಎನ್ಸಿಪಿ ವಿರುದ್ಧದ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ನಾವು ಎನ್ಸಿಪಿ ಜತೆ ಚುನಾ-ವಣೆಯ ನಂತರವೂ ಮೈತ್ರಿ ಮಾಡಿ-ಕೊಳ್ಳು-ವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ.
‘ಎನ್ಸಿಪಿ ಜತೆ ಮೈತ್ರಿ ಪ್ರಶ್ನೆಯೇ ಬರುವುದಿಲ್ಲ. ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದೇವೆ. ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಅಸ್ತಿತ್ವ ಇರುವುದಿಲ್ಲ’ ಎಂದು ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಎಸ್ಪಿ ಜತೆ ಸಖ್ಯ: ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷ ಹಾಗೂ ಇನ್ನಿತರ ಕೆಲವು ದಲಿತ ಸಂಘಟನೆಗಳ ಜತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಎಐಸಿಸಿ ಮೂಲಗಳ ಪ್ರಕಾರ ಪಕ್ಷವು ಎಲ್ಲ ೨೮೮ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.