ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಟ್ಟು 7,666 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ಭಾನುವಾರ ತಿಳಿಸಿದೆ.
ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯದಿನ ವಾಗಿತ್ತು. ಸೆ. 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೆ. 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. 288 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪಂಚ ಕೋನ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ.
ಸೀಟು ಹಂಚಿಕೆ ವಿಷಯವಾಗಿ ಬಿಜೆಪಿ ಜೊತೆಗಿನ ಕಾಲು ಶತಮಾನದ ಮೈತ್ರಿ ಮುರಿದು ಬಿದ್ದ ಬಳಿಕ ಶಿವಸೇನೆಯು 286 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ದಕ್ಷಿಣ ನಾಂದೇಡ್ ಕ್ಷೇತ್ರದಲ್ಲಿ ಅತಿಹೆಚ್ಚು 91 ನಾಮಪತ್ ಸಲ್ಲಿಕೆಯಾಗಿವೆ. ರತ್ನಗಿರಿ ಜಿಲ್ಲೆಯ ಗುಹಾಗಢ್, ಮುಂಬೈನ ಮಹಿಮ್ ಹಾಗೂ ಸಿಂಧುದುರ್ಗದ ಕುದಾಲ್ ಕ್ಷೇತ್ರಗಳಲ್ಲಿ ತಲಾ ಒಂಬತ್ತು ನಾಮಪತ್ರ ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಎಲ್ಲಾ 288 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್ ಸಿಪಿಯ 286 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
257 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ಕೇಶವ್ ಉಪಾಧ್ಯೆ ಅವರು ಶನಿವಾರ ತಿಳಿಸಿದ್ದರು. ‘ಇನ್ನುಳಿದ 31ಸ್ಥಾನಗಳನ್ನು ಮೈತ್ರಿ ಪಕ್ಷಗಳಿಗೆ ನೀಡಲಾಗಿದೆ’ಎಂದೂ ಅವರು ಹೇಳಿದ್ದರು.
ಆದರೆ, ಗೋಪಿನಾಥ್ ಮುಂಡೆ ಅವರ ಮಗಳು ಪಂಕಜಾ ಮುಂಡೆ (ಬಿಜೆಪಿ ಅಭ್ಯರ್ಥಿ) ಉಮೇದುವಾರಿಕೆ ಸಲ್ಲಿಸಿರುವ ಪರ್ಲಿ ಹಾಗೂ ಅರುಣ್ ಗೌಳಿ ಅವರ ಪುತ್ರಿ ಗೀತಾ ಅವರು ನಾಮಪತ್ರ ಸಲ್ಲಿಸಿರುವ ಬಾಯ್ಕಲ್ಲಾ ಕ್ಷೇತ್ರಗಳಲ್ಲಿ ಶಿವಸೇನೆ ಅಭ್ಯರ್ಥಿಗಳಿಲ್ಲ.