ಬೆಂಗಳೂರು: ‘ಸುದ್ದಿ ವಾಹಿನಿಗಳು ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ಅಳುವನ್ನೇ ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಟಿಆರ್ಪಿ ಹೆಚ್ಚಿಸಿಕೊಳ್ಳಲು ಮಹಿಳೆಯರನ್ನು ಮಾನಸಿಕವಾಗಿ ಕೊಲ್ಲುತ್ತಿವೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಆಕ್ರೋಶ ವ್ಯಕ್ತಪಡಿಸಿದರು.
ಗಿರಿನಗರದಲ್ಲಿರುವ ‘ಅಕ್ಷರಂ’ನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಸಂಸ್ಕೃತ ಸಾಹಿತ್ಯದಲ್ಲಿ ಬಿಂಬಿತವಾದ ಮಹಿಳೆಯರ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪುರುಷ ಪ್ರಧಾನ ಸಮಾಜದಲ್ಲಿ ಬದುಕುತ್ತಿದ್ದರೂ ಕೊನೆಪಕ್ಷ ತನಗೆ ಅವರಿಂದ ರಕ್ಷಣೆ ಸಿಗುತ್ತಿದೆ ಎಂಬ ವಿಶ್ವಾಸದಲ್ಲಿ ಮಹಿಳೆ ಇದ್ದಳು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ಭ್ರೂಣದಲ್ಲಿಯೇ ಆಕೆಯನ್ನು ಕೊಲೆ ಮಾಡಲಾಗುತ್ತಿದೆ. ಪ್ರಪಂಚಕ್ಕೆ ಕಾಲಿಟ್ಟ ಕ್ಷಣದಿಂದಲೇ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರನ್ನು ರಕ್ಷಿಸಿ ಪುರುಷರೇ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ಡಾ.ಎಸ್.ಆರ್.ಲೀಲಾ, ‘ವೇದ, ಉಪನಿಷತ್ಗಳಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಚಿತ್ರಿಸಲಾಗಿದೆ. ಅಲ್ಲದೇ, ಪುರುಷನಿಗೆ ಸರಿಸಮನಾಗಿ ಬಿಂಬಿಸಲಾಗಿದೆ. ಹೆಣ್ಣಿನ ಬಗ್ಗೆ ಅದ್ಭುತ ಕಲ್ಪನೆಗಳಿವೆ. ಒಂದು ಬಟಾಣಿಯ ಎರಡು ಭಾಗಗಳಿದ್ದಂತೆ ಎಂದು ವಿವರಿಸಲಾಗಿದೆ. ಆದರೆ, ಈಗ ಮಹಿಳೆಯನ್ನು ಕೀಳಾಗಿ ಚಿತ್ರಿಸಲಾಗುತ್ತಿದೆ. ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.
‘ನಮ್ಮ ಧರ್ಮ, ನಮ್ಮ ಭಾಷೆ, ನಮ್ಮ ಸಂಪ್ರದಾಯವನ್ನೇ ಕೀಳಾಗಿ ನೋಡುವ ಮನೋಭಾವನೆ ಕೆಲವರಲ್ಲಿದೆ. ಈ ಅಂಶಗಳನ್ನು ಮನಸ್ಸಿನಿಂದ ಕಿತ್ತುಹಾಕಬೇಕು. ಅದಕ್ಕಾಗಿ ಬೇರೆ ಧರ್ಮ, ಬೇರೆ ಭಾಷೆಗಳನ್ನು ಅಧ್ಯಯನ ಮಾಡಬೇಕು. ಅವುಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕು’ ಎಂದರು.
ಸಂಸ್ಕೃತ ವಿವಿ ಪ್ರಶಾಸನ ಸಮಿತಿ ಸದಸ್ಯ ಪ್ರೊ.ಕೆ.ಇ.ರಾಧಾಕೃಷ್ಣ ಅವರು, ‘ಸ್ವಯಂರಕ್ಷಣೆಗಾಗಿ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿಕೊಡಲಾಗುತ್ತಿದೆ. ಅದೊಂದು ಒಳ್ಳೆಯ ನಿರ್ಧಾರ. ಅದಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಗಂಡು ಮಕ್ಕಳಿಗೆ ಮನೆಯಲ್ಲಿ ಪಾಠ ಹೇಳಿಕೊಡಬೇಕು’ ಎಂದು ತಿಳಿಸಿದರು. ಮೂರು ದಿನಗಳ ಈ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳ 180 ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 77 ಮಂದಿ ಪ್ರಬಂಧ ಮಂಡಿಸಿದರು.