ಬೆಂಗಳೂರು: ಬಿಜೆಪಿ ನಾಯಕ ಬೇಳೂರು ಗೋಪಾಲಕೃಷ್ಣ ಅವರ ಪುತ್ರಿ ಮೇಘಾ ವಂದನಾ ಅವರ ಭಾವಚಿತ್ರಗಳನ್ನು ದುರ್ಬಳಕೆ ಮಾಡಿ ಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿದ ಆರೋಪದ ಮೇಲೆ ಪ್ರತಿಮಾ ಎಂಬುವರನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
‘ಸ್ನೇಹಿತೆಯಾದ ಪ್ರತಿಮಾ ನನ್ನ ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಫೇಸ್ಬುಕ್, ವಾಟ್ಸ್ ಆ್ಯಪ್ ಮತ್ತು ವಿ–ಚಾಟ್ನಲ್ಲಿ ನಕಲಿ ಖಾತೆ ತೆರೆದಿದ್ದಾಳೆ. ಆ ಖಾತೆಗಳ ಮೂಲಕ ಸ್ನೇಹಿತರಿಗೆ ನನ್ನ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಗೌರವಕ್ಕೆ ಧಕ್ಕೆ ತಂದಿದ್ದಾಳೆ’ ಎಂದು ಆರೋಪಿಸಿ ಮೇಘಾ ಅವರು ಜು.17ರಂದು ಪೊಲೀಸರಿಗೆ ದೂರು ನೀಡಿದ್ದರು.
ಚೆನ್ನೈ ಮೂಲದ ಪ್ರತಿಮಾ, ಮೇಘಾ ಅವರ ಅಸಲಿ ಫೇಸ್ಬುಕ್ ಖಾತೆಯಿಂದ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಈ ದುಷ್ಕೃತ್ಯ ಎಸಗಿದ್ದಾಳೆ. ಆಕೆ, ವಾಟ್ಸ್ಆ್ಯಪ್ ಮತ್ತು ವಿ–ಚಾಟ್ ಮೂಲಕ ಮೇಘಾ ಹೆಸರಿನಲ್ಲಿ ಅವರ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಳು ಹಾಗೂ ಚಾಟ್ ಮಾಡಿದ್ದಳು.
ಈ ಬಗ್ಗೆ ಕೆಲ ದಿನಗಳ ಹಿಂದೆ ಮೇಘಾ ಅವರಿಗೆ ಕರೆ ಮಾಡಿದ ಸ್ನೇಹಿತರು, ಅಶ್ಲೀಲ ಸಂದೇಶಗಳು ಬರುತ್ತಿರುವ ಸಂಗತಿ ಯನ್ನು ಗಮನಕ್ಕೆ ತಂದಿದ್ದಾರೆ. ನಂತರ ಮೇಘಾ, ಆ ಸಂದೇಶಗಳು ಯಾವ ಮೊಬೈಲ್ ಸಂಖ್ಯೆಯಿಂದ ಬರುತ್ತಿವೆ ಎಂದು ಸ್ನೇಹಿತರಿಂದ ಮಾಹಿತಿ ಪಡೆದು ಪರಿಶೀಲಿಸಿದಾಗ ಪ್ರತಿಮಾಳೇ ಈ ಕೃತ್ಯ ಎಸಗುತ್ತಿರುವುದೆಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಮಾ ಮತ್ತು ಮೇಘಾ, ಈ ಹಿಂದೆ ತಮಿಳುನಾಡಿನ ಪ್ರೌಢ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪ್ರತಿಮಾ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ದುರ್ಬಳಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ನಗರಕ್ಕೆ
‘ಸಿಬ್ಬಂದಿ, ಪ್ರತಿಮಾಳನ್ನು ಚೆನ್ನೈನಲ್ಲಿ ಭಾನುವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಸೋಮವಾರ (ಜು.21) ಬೆಳಿಗ್ಗೆ ಆಕೆಯನ್ನು ನಗರಕ್ಕೆ ಕರೆದುಕೊಂಡು ಬರಲಾಗುತ್ತದೆ. ಆಕೆಯ ವಿದ್ಯಾಭ್ಯಾಸ, ಕುಟುಂಬ ಹಿನ್ನೆಲೆಯ ಬಗ್ಗೆ ವಿಚಾರಣೆ ಬಳಿಕವಷ್ಟೇ ಮಾಹಿತಿ ಸಿಗಲಿದೆ’
–ಸಂದೀಪ್ ಪಾಟೀಲ್, ಉತ್ತರ ವಿಭಾಗದ ಡಿಸಿಪಿ
ಯುವಕರೊಂದಿಗೆ ಚೆಲ್ಲಾಟ
‘ಪ್ರತಿಮಾ ನನ್ನ ಹೆಸರಿನಲ್ಲಿ ಹಲವು ಯುವಕರಿಗೆ ಅಶ್ಲೀಲ ಸಂದೇಶ ಕಳುಹಿಸಿ, ಚೆಲ್ಲಾಟವಾಡಿದ್ದಾಳೆ. ಆಕೆಯಿಂದ ವಂಚನೆಗೊಳಗಾಗಿರುವ ಯುವಕರು, ನನಗೆ ತೊಂದರೆ ಮಾಡಬಹುದೆಂಬ ಆತಂಕದಿಂದ ಪೊಲೀಸರಿಗೆ ದೂರು ನೀಡಿದೆ. ಆಕೆಯ ದುಷ್ಕೃತ್ಯದಿಂದ ಸಾರ್ವಜನಿ ಕವಾಗಿ ಓಡಾಡುವುದೇ ಕಷ್ಟವಾಗಿದೆ’
–ಮೇಘಾ ವಂದನಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.