ಬೆಂಗಳೂರು: ಅಂತರರಾಷ್ಟ್ರೀಯ ಮಾದಕ ವಸ್ತು ತಡೆ ದಿನಾಚರಣೆ ಅಂಗವಾಗಿ ನಗರದ ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದ ತನಕ ಭಾನುವಾರ ಜಾಗೃತಿ ಜಾತಾ ನಡೆಯಿತು.
ಸಿಐಡಿ, ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳ(ಎನ್ಸಿಬಿ) ಹಾಗೂ ಆರ್ಎಸ್ಪಿ ಸಂಘಟನೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್, ಎಡಿಜಿಪಿ ಭಾಸ್ಕರ್ರಾವ್ ಹಾಗೂ ಸಿಐಡಿ ಎಸ್ಪಿ ಡಿ.ಸಿ ರಾಜಪ್ಪ ಸೇರಿದಂತೆ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಯಾವುದೇ ದೇಶದ ಸಂಸ್ಕೃತಿ, ಯುವ ಜನಾಂಗ ನಾಶವಾದರೆ, ಅದು ದೇಶವೇ ನಾಶ ಆದಂತೆ. ಆದ್ದರಿಂದ ಯುವ ಜನಾಂಗ ಮಾದಕ ವ್ಯಸನಗಳಿಗೆ ಬಲಿಯಾಗಬಾರದು’ ಎಂದು ಕರೆ ಕೊಟ್ಟರು.
ಪ್ರತಿವರ್ಷ ಮಾದಕ ವಸ್ತುಗಳಿಗೆ 60 ಲಕ್ಷ ಜನರು ಬಲಿಯಾಗುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷಕ್ಕೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ಮಾದಕ ವ್ಯಸನಗಳಿಗೆ ಬಲಿಯಾದವರ ಸಂಖ್ಯೆ ಶೇಕಡ 15ರಷ್ಟಿದೆ. ಆದರೆ, ಶೇಕಡ 60ರಷ್ಟು ಅಪರಾಧಗಳಲ್ಲಿ ಅವರ ಪಾಲು ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.