ಡಾ.ಸರೋಜಿನಿ ಮಹಿಷಿ ಇನ್ನಿಲ್ಲ. ಕನ್ನಡಿಗರ ಉದ್ಯೋಗದಾಸೆಯ ಬೆಳ್ಳಿಕಿರಣವಾಗಿದ್ದ ಅವರ ವರದಿ ಸಲ್ಲಿಕೆಯಾಗಿ ಮೂರು ದಶಕಗಳು ಉರುಳಿದರೂ ಸಂಪೂರ್ಣ ಅನುಷ್ಠಾನ ಭಾಗ್ಯವಿಲ್ಲದಿರುವುದು ಶೋಚನೀಯ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ ಜೀವನ ಭದ್ರತೆ ಒದಗಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸೋಜಿಗ.
ಕರ್ನಾಟಕದಲ್ಲಿ ನಿಜಕ್ಕೂ ಕನ್ನಡಿಗರ ಆಡಳಿತವಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಕನ್ನಡಿಗರ ಸರ್ಕಾರ ಇದ್ದಿದ್ದರೆ ಖಂಡಿತ ಈ ವರದಿಯನ್ನು ಜಾರಿಗೊಳಿಸುತ್ತಿತ್ತು. ಸರ್ಕಾರ ತನ್ನ ಎಡಬಿಡಂಗಿ ಧೋರಣೆಯಿಂದ ಕನ್ನಡಿಗರನ್ನು ಅತಂತ್ರಗೊಳಿಸಿದೆ.
ಸರ್ಕಾರ ಅನ್ಯರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುತ್ತಿದೆ. ನೆಲ, ಜಲ, ವಿದ್ಯುತ್ ಕೊಟ್ಟು, ತೆರಿಗೆ ವಿನಾಯಿತಿ ನೀಡಿ, ಅವರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕರುಣಿಸುತ್ತದೆ. ಆದರೆ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಹಿಂದೆಮುಂದೆ ನೋಡುತ್ತಿದೆ. ಇದು ಬಹುದೊಡ್ಡ ಅಪಾಯ.