ಮದುರೆ (ಪಿಟಿಐ): ಅಪರಾಧಿಗಳ ವಿನಿಮಯ ಒಪ್ಪಂದದ ಅನ್ವಯ ಶ್ರೀಲಂಕಾದ ಜೈಲಿನಲ್ಲಿರುವ ತಮಿಳುನಾಡಿನ ಐವರು ಮೀನುಗಾರರ ಬಿಡುಗಡೆಗೆ ಸಂಬಂಧಿಸಿದಂತೆ ಕೊಲಂಬೊದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಪೀಠಕ್ಕೆ ಸೋಮವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ.
ವಕೀಲ ಎಸ್.ಎಂ. ಅನಂತ ಮುರುಗನ್ ಈ ಅರ್ಜಿ ಸಲ್ಲಿಸಿದ್ದಾರೆ. ಸಮುದ್ರ ಗಡಿ ಮತ್ತು ಕೈದಿಗಳ (ವಿಚಾರಣೆ ಎದುರಿಸುತ್ತಿರುವ ಮತ್ತು ಶಿಕ್ಷೆಗೆ ಗುರಿಯಾಗಿರುವ) ವಿನಿಮಯ ಒಪ್ಪಂದ ಸೇರಿದಂತೆ ಭಾರತ ಮತ್ತು ಶ್ರೀಲಂಕಾ ಮಧ್ಯೆ ಏರ್ಪಟ್ಟಿರುವ ಒಂಬತ್ತು ಒಪ್ಪಂದಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ. ಏತನ್ಮಧ್ಯೆ, ಮೀನುಗಾರರ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮೀನುಗಾರನೊಬ್ಬನ ಪತ್ನಿ ಸಲ್ಲಿಸಿರುವ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೇಣುಗೋಪಾಲ್ ಅವರು ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ್ದಾರೆ.