ಈ ವರ್ಷ ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತಲೂ ಕಡಿಮೆಯಾಗಲಿದೆ. ಹವಾಮಾನ ಇಲಾಖೆ ನೀಡಿದ ಈ ಮುನ್ನೆಚ್ಚರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿಯೇ ಪರಿಗಣಿಸಬೇಕು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಎಂದಿನ ಜಡ ಧೋರಣೆ ಬಿಟ್ಟು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಈಗಿನಿಂದಲೆ ಸೂಕ್ತ ತಯಾರಿ ಮಾಡಿಕೊಳ್ಳಬೇಕು.
ಸಮರ್ಪಕವಾಗಿ ಮಳೆಯಾಗದೇ ಹೋದರೆ ಅದು ಅನಾಹುತಗಳ ಸರಣಿಗೆ ಎಡೆ ಮಾಡುತ್ತದೆ. ಏಕೆಂದರೆ ಹಳ್ಳಿಗಾಡಿನ ಬಹುಪಾಲು ಕುಟುಂಬಗಳು ಈಗಲೂ ಕೃಷಿಯನ್ನೇ ಅವಲಂಬಿಸಿವೆ. ನಮ್ಮ ದೇಶದ ಅರ್ಧದಷ್ಟು ಕೃಷಿ ಭೂಮಿಗೆ ಈಗಲೂ ನೀರಾವರಿ ಸೌಲಭ್ಯ ಇಲ್ಲ. ಅವಕ್ಕೆಲ್ಲ ಮುಂಗಾರು ಮಳೆಯೇ ಏಕಮಾತ್ರ ಆಧಾರ. ಮಳೆಯ ಏರುಪೇರು ಕೃಷಿ ಉತ್ಪಾದನೆಯನ್ನು ಕುಂಠಿತಗೊಳಿಸಿ ಬೆಲೆ ಏರಿಕೆಗೆ ಕಾರಣವಾಗಬಹುದು. ಹಣದುಬ್ಬರ ಹೆಚ್ಚಬಹುದು, ಬರ ಪರಿಸ್ಥಿತಿ ಎದುರಾಗಬಹುದು.
ಅದರಿಂದ ಗ್ರಾಹಕ ವಸ್ತುಗಳ ಬೇಡಿಕೆ ಕುಗ್ಗಿ ಇಡೀ ಅರ್ಥವ್ಯವಸ್ಥೆ ಮೇಲೆ ಒತ್ತಡ ಹೆಚ್ಚುತ್ತದೆ, ಸರ್ಕಾರದ ಆದಾಯವೂ ಕುಸಿಯುತ್ತದೆ, ಬರ ನಿಭಾಯಿಸಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅರ್ಥವ್ಯವಸ್ಥೆಯ ಮಂದಗತಿ ಬೆಳವಣಿಗೆ ಮತ್ತು ಹಣದುಬ್ಬರ ಈಗಲೇ ಇಡೀ ದೇಶವನ್ನು ಬಾಧಿಸುತ್ತಿದೆ. ಇದರ ಸರಣಿ ದುಷ್ಪರಿಣಾಮಗಳನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಹೆಣಗುತ್ತಲೇ ಇದೆ. ನಮ್ಮ ದೇಶಿಯ ಆದಾಯದಲ್ಲಿ ಕೃಷಿಯ ಪಾಲು ಶೇ 14ರಷ್ಟು ಮಾತ್ರ ಎನ್ನುವುದೇನೋ ನಿಜ. ಆದರೆ ಒಟ್ಟಾರೆ ಉದ್ಯೋಗದ ಅರ್ಧದಷ್ಟು ಭಾಗ ಕೃಷಿ ಕ್ಷೇತ್ರದ ಕೊಡುಗೆ ಎಂಬ ವಾಸ್ತವವನ್ನು ಮರೆಯುವಂತಿಲ್ಲ.
ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಗೋದಾಮುಗಳೆಲ್ಲ ತುಂಬಿ ತುಳುಕುತ್ತಿವೆ, ಹಾಗಾಗಿ ಏನೂ ತೊಂದರೆಯಾಗದು ಎಂದು ಹುಸಿ ಸಮಾಧಾನಪಟ್ಟು ಮೈಮರೆತರೆ ಅಪಾಯ ಜಾಸ್ತಿ. ಏಕೆಂದರೆ ಉತ್ತಮ ಮಳೆಯ ವರ್ಷದಲ್ಲಿ ನಮ್ಮ ರಾಜ್ಯದಲ್ಲೇ 125ಕ್ಕೂ ಹೆಚ್ಚು ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ಅದರಿಂದಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರು, ಮೇವು ಮತ್ತು ಗ್ರಾಮೀಣ ಭಾಗದಲ್ಲಿ ದುಡಿವ ಕೈಗಳಿಗೆ ಕೆಲಸದ ಕೊರತೆ ಎದುರಾಗಿದೆ.
ಹವಾಮಾನಕ್ಕೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಮಟ್ಟದ ಅನೇಕ ಸಂಘಟನೆಗಳು ಕೂಡ ಈ ವರ್ಷ ಮುಂಗಾರು ಮಳೆ ಪ್ರಮಾಣದಲ್ಲಿ ಕುಸಿತದ ಅಂದಾಜು ಮಾಡಿವೆ. ಶಾಂತಸಾಗರದ ನೀರು ಬಿಸಿಯಾಗುವುದರಿಂದ ‘ಎಲ್ ನಿನೊ’ ಪರಿಣಾಮ ಉಂಟಾಗಲಿದೆ. ಅದು ಭಾರತ ಸೇರಿದಂತೆ ಆಗ್ನೇಯ ಏಷ್ಯದ ದೇಶಗಳ ಮಳೆ- ಬೆಳೆ ಮೇಲೆ ಅನಾಹುತಕಾರಿ ಪ್ರಭಾವ ಬೀರುತ್ತದೆ. ನಮ್ಮಲ್ಲಿ 2002, 2004 ಮತ್ತು 2009ರಲ್ಲಿ ಎಲ್ ನಿನೊ ಅಂಶದಿಂದಾಗಿಯೇ ಮಳೆ ಕಡಿಮೆಯಾಗಿ ವ್ಯಾಪಕ ಬರದ ಬಿಸಿ ತಟ್ಟಿತ್ತು.
ಪ್ರಕೃತಿಯಲ್ಲಿ ಮುಂಗಾರಿನಷ್ಟು ಚಂಚಲ ಬೇರೊಂದಿಲ್ಲ. ಹಾಗಾಗಿ ಹವಾಮಾನ ತಜ್ಞರು ಮಾಡಿರುವ ಅಂದಾಜು ಲೆಕ್ಕಾಚಾರ ಹೆಚ್ಚೂಕಡಿಮೆ ಆಗಲೂ ಬಹುದು. ಆದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಲು ಕಾರ್ಯಪ್ರವೃತ್ತರಾಗಬೇಕು. ಲೋಕಸಭೆ ಚುನಾವಣೆ ನಂತರ ಅಧಿಕಾರಕ್ಕೆ ಬರಲಿರುವ ಸರ್ಕಾರ ಇದಕ್ಕೆಲ್ಲ ಸಜ್ಜಾಗಬೇಕಾಗುತ್ತದೆ. ಕೃಷಿಗೆ ಆಗಬಹುದಾದ ತೊಂದರೆಯನ್ನು ಮಿತಿಗೊಳಿಸಲು ಏನು ಮಾಡುತ್ತೇವೆ ಎಂಬುದರ ಮೇಲೆ ಇಡೀ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಜಾಣ್ಮೆ ಅಡಗಿದೆ. ಅದಕ್ಕಾಗಿ ಲಭ್ಯವಿರುವ ತಂತ್ರಜ್ಞಾನ, ಅನುಭವಗಳನ್ನೆಲ್ಲ ಬಳಸಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.