ಬೀಡ್, ಮಹಾರಾಷ್ಟ್ರ (ಪಿಟಿಐ): ಬಿಜೆಪಿ ಸಂಸದ ಗೋಪಿನಾಥ್ ಮುಂಡೆ ಅವರನ್ನು ಬೀಡ್ನಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ನಿರಾಕರಿಸಿದ ಹೆಲಿಕಾಪ್ಟರ್ ಪೈಲಟ್ ಒಬ್ಬನನ್ನು ಥಳಿಸಿದ ಬಿಜೆಪಿಯ ಹತ್ತು ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ಗುರುವಾರ ಮುಂಡೆ ಅವರು ಮುಂಬೈಯಿಂದ ಬೀಡ್ನ ಪೊಲೀಸ್ ಮೈದಾನಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ನಂತರ ಅವರು ಕೈಜಿ ತಹಶೀಲ್ನ ವಿದಾ ಗ್ರಾಮಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಲು ಬಯಸಿದ್ದರು. ಆದರೆ ಇಂಧನ ಕಡಿಮೆ ಇದೆ ಎಂಬ ಕಾರಣಕ್ಕೆ ಪೈಲಟ್ ಇದಕ್ಕೆ ಒಪ್ಪಲಿಲ್ಲ.
ಇದರಿಂದ ಕುಪಿತಗೊಂಡ ಮುಂಡೆ ಬೆಂಬಲಿಗರು ಪೈಲಟ್ ಮೇಲೆ ಕೈ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪೈಲಟ್ ನೀಡಿದ ದೂರಿನ ಅನ್ವಯ ಮುಂಡೆ ಅವರ ಹತ್ತು ಮಂದಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಧರ್ಮಸಿಂಗ್ ಚವಾಣ್ ತಿಳಿಸಿದ್ದಾರೆ.