ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ಹೊಸ ಶಿಕ್ಷಣ ನೀತಿ

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ನೂತನ ಶಿಕ್ಷಣ ನೀತಿ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸೋಮವಾರ ತಿಳಿಸಿದರು.

‘ಈ ನೀತಿ ರೂಪಿಸಲು  ಶಿಕ್ಷಣ ಕ್ಷೇತ್ರದಲ್ಲಿನ ಸಾಕಷ್ಟು ಜನರನ್ನು ಭಾಗಿ ಮಾಡಿಕೊಂಡಿದೆ. ಅಲ್ಲದೆ ಆನ್‌ಲೈನ್‌ ಮೂಲಕ ಸಲಹೆ  ಪಡೆದುಕೊಳ್ಳಲಾಗಿದೆ ಹಾಗೂ ರಾಷ್ಟ್ರಮಟ್ಟದಲ್ಲಿ ವಿಷಯಾಧಾರಿತ ಚರ್ಚೆ  ನಡೆಸಲಾಗಿದೆ. 2 ಲಕ್ಷ ಗ್ರಾಮ ಪಂಚಾಯಿತಿ, ಆರು ಲಕ್ಷಕ್ಕೂ ಹೆಚ್ಚು ಬ್ಲಾಕ್‌ ಮತ್ತು ಹಲವಾರು ನಗರ ಪ್ರದೇಶ ಗಳಿಂದಲೂ ಸಲಹೆ ಪಡೆಯಲಾಗಿದೆ’ ಎಂದು ಹೇಳಿದರು. ಸಿಬಿಎಸ್ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ನಡುವೆ ಮುಂದಿನ ವರ್ಷ ದಿಂದ ಉತ್ತಮ ಸಮನ್ವಯ ಸಾಧಿಸ ಲಾಗುವುದು ಎಂದರು. 

ಸ್ವಲ್ಪ ಅಸಹಿಷ್ಣುತೆ ಇದೆ (ನವದೆಹಲಿ ವರದಿ): ಸಮಾಜದಲ್ಲಿ ‘ಸ್ವಲ್ಪ ಮಟ್ಟಿನ’ ಅಸಹಿಷ್ಣುತೆ ಇದೆ. ಅದನ್ನು ಗುರುತಿಸಬೇಕು ಮತ್ತು ಅದರ ವಿರುದ್ಧ ದೃಢ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಅಸಹಿಷ್ಣುತೆಯನ್ನು ಸಾಮಾನ್ಯೀಕರಣಗೊಳಿಸಬಾರದು ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಯಾವುದೇ ನಿರ್ದಿಷ್ಟ ಪ್ರಕರಣವನ್ನು ಅವರು ಉಲ್ಲೇಖಿಸಲಿಲ್ಲ. ಆದರೆ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ಖಂಡಿಸಬೇಕು ಮತ್ತು ಅಂಥವರನ್ನು ದೂರ ಇರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ನರೇಂದ್ರ ಮೋದಿ ಅವರು ಪ್ರಧಾನಿಯಾದರು ಎಂಬ ಕಾರಣಕ್ಕಾಗಿಯೇ ಅಸಹಿಷ್ಣುತೆ ಪ್ರಕರಣಗಳು ನಡೆಯುತ್ತಿಲ್ಲ. ಇಂತಹ ಘಟನೆಗಳು ಹಿಂದಿನಿಂದಲೂ ನಡೆಯುತ್ತಲೇ ಇವೆ ಎಂದು ವೆಂಕಯ್ಯ ಹೇಳಿದರು.

ಸಲ್ಮಾನ್‌ ರಶ್ದಿ ಅವರ ವಿವಾದಾತ್ಮಕ ಕೃತಿ ‘ಸಟಾನಿಕ್‌ ವರ್ಸಸ್‌’ ನಿಷೇಧ ತಪ್ಪು ನಿರ್ಧಾರ ಎಂದು ಕಾಂಗ್ರೆಸ್‌ ಮುಖಂಡ ಚಿದಂಬರಂ ಹೇಳಿರುವುದನ್ನು ವೆಂಕಯ್ಯ ಸ್ವಾಗತಿಸಿದರು. ‘ಎರಡು ಅಂಶಗಳಿವೆ– ಮೊದಲನೆಯದಾಗಿ ಜನರು ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಆದರೆ ಇಂತಹ ಪುಸ್ತಕಗಳು ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಮತ್ತು ಸಾಮಾಜಿಕ ಸಂಘರ್ಷಕ್ಕೆ ಕಾರಣ ಆಗಬಾರದು.

ಹಾಗೆಯೇ ಜನರಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇವೆ. ಇವುಗಳ ನಡುವೆ ಸಮತೋಲನಕ್ಕೆ  ಸಹಮತದ ಅಗತ್ಯ ಇದೆ’ ಎಂದು ವೆಂಕಯ್ಯ ವಿವರಿಸಿದರು. ಸಲ್ಮಾನ್‌ ರಶ್ದಿ ಅವರ ಪುಸ್ತಕ ನಿಷೇಧ ಮಾಡಿದಾಗ ಒಂದು ವರ್ಗ ಸಂತೋಷ ಪಡುತ್ತದೆ. ಶಿವಾಜಿ ಬಗೆಗಿನ ಕೃತಿ ನಿಷೇಧ ಮಾಡಿದಾಗ ಪ್ರತಿಭಟನೆ ನಡೆಯುತ್ತದೆ. ಪ್ರತಿಯೊಂದಕ್ಕೂ ಹಿಂದೂ ಆಯಾಮವೂ, ಮುಸ್ಲಿಂ ಆಯಾಮವೂ ಇರುತ್ತದೆ’ ಎಂದು ಅವರು ಹೇಳಿದರು.

ಸದನದಲ್ಲಿ ಅಸಹಿಷ್ಣುತೆ ತೋರದಿರಿ: ಸ್ಪೀಕರ್ ಕಿವಿಮಾತು
ನವದೆಹಲಿ (ಐಎಎನ್‌ಎಸ್‌):
‘ಸದನದಲ್ಲಿ ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುವಾಗ ನೀವು (ಸಂಸದರು) ಅಸಹಿಷ್ಣುತೆ ತೋರಬೇಡಿ. ಇತರ ಸದಸ್ಯರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ’ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್‌ ಸೋಮವಾರ ಸಂಸದರಿಗೆ ಸೂಚನೆ ನೀಡಿದರು. ಸದನದಲ್ಲಿ ಚರ್ಚೆ ಶುರುವಾಗುವ ಮುನ್ನ ಮಾತನಾಡಿದ ಸುಮಿತ್ರಾ, ‘ಸಂಸದರು ಜನರ ನಾಯಕರಂತೆ ವರ್ತಿಸಬೇಕು. ಇಂದಿನ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ ಎನ್ನುವ ನಿರೀಕ್ಷೆ ಇದೆ’ ಎಂದು ಹೇಳಿದರು.  

‘ದೇಶದ ಮುಂದೆ ಕೆಲವು ಪ್ರಶ್ನೆಗಳಿವೆ. ಚರ್ಚೆ ಅರ್ಥಪೂರ್ಣವಾಗಿ ಜರುಗಿ, ಧನಾತ್ಮಕ ಸೂಚನೆ ನೀಡಬಹುದು ಎನ್ನುವ ನಿರೀಕ್ಷೆ ಇದೆ. ಅದಕ್ಕಾಗಿಯೇ ಈ ಚರ್ಚೆಗೆ ಒಪ್ಪಿಗೆ ದೊರೆತಿದೆ’ ಎಂದರು. ‘ಸಂಸತ್ ಸದಸ್ಯರು ತಮ್ಮ ಜವಾಬ್ದಾರಿ ಅರಿತಿದ್ದಾರೆ ಎಂದು ಕೊಳ್ಳುವೆ. ಕನಿಷ್ಠ ಇಲ್ಲಾದರೂ ಅಸಹಿಷ್ಣುತೆ ತೋರುವುದಿಲ್ಲ ಎಂಬ ನಂಬಿಕೆ  ಇದೆ’ ಎಂದು ಸುಮಿತ್ರಾ ಹೇಳಿದರು.

***
‘ಇ-ಪಾಠಶಾಲಾ’ ಯೋಜನೆ ಜಾರಿ ಯಾಗಲಿದ್ದು, 12ನೇ ತರಗತಿವರೆಗಿನ ಸಿಬಿಎಸ್ಇ ಪುಸ್ತಕಗಳು ಆನ್‌ ಲೈನ್ ಹಾಗೂ ಮೊಬೈಲ್ ಫೋನ್ ಅಪ್ಲಿ ಕೇಷನ್‌ಗಳ ಮೂಲಕ  ಲಭ್ಯವಾಗಲಿವೆ .
-ಸ್ಮೃತಿ ಇರಾನಿ,
ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT