ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಕಾಮಗಾರಿಯ ಶಂಕುಸ್ಥಾಪನೆಗೆ ಚಾಲನೆ ನೀಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನಕ್ಕಾಗಿ ಬೃಹತ್ ವೇದಿಕೆ ಸಜ್ಜಾಗಿದೆ.
ಸಮಾರಂಭಕ್ಕೆ ಸುಮಾರು 10 ಸಾವಿರ ಕಾರ್ಯಕರ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಮಹಿಳೆ ಮತ್ತು ವಿಐಪಿ ಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ತಿಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಪೂರ್ಣಗೊಂಡಿದೆ. ರಸ್ತೆ ಬದಿಗಳಲ್ಲಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು, ಶಾಸಕ ಕೆ.ಎನ್.ರಾಜಣ್ಣ, ಸಂಸದ ಮುದ್ದಹನುಮೇಗೌಡ, ಸ್ಥಳೀಯ ಮುಖಂಡರು ಭಾವಚಿತ್ರವುಳ್ಳ ಪ್ಲೆಕ್ಸ್, ಬ್ಯಾನರ್ಗಳ ಭರಾಟೆ ಜೋರಾಗಿದೆ.
ಮುಖ್ಯಮಂತ್ರಿ ಆಗಮನಕ್ಕೆ ಹೆಲಿಪ್ಯಾಡ್ ಕೂಡ ಸಜ್ಜಾಗಿದೆ. ತಾಲ್ಲೂಕಿನ ಗಡಿ ಭಾಗವಾದ ಮಿಡಿಗೇಶಿ ಹೋಬಳಿಗೆ ಪ್ರಪ್ರಥಮ ಭಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದರಿಂದ ನಮಗೆ ಹೆಚ್ಚು ಖುಷಿಯಾಗಿದೆ ಎಂದು ಸ್ಥಳೀಯರಾದ ಗೋವಿಂದರಾಜು ಹೇಳುತ್ತಾರೆ.
ಪೊಲೀಸ್ ಬಿಗಿ ಬಂದೊಬಸ್ತ್: ಮಿಡಿಗೇಶಿ ಗ್ರಾಮಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಸುತ್ತ-ಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಒಟ್ಟು ೪೦೦ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. ಮಳವಳ್ಳಿ-–ಪಾವಗಡ ಅಂತರ ರಾಜ್ಯ ಸಂಪರ್ಕ ಕಲ್ಪಿಸುವ 576 ಕೋಟಿ ವೆಚ್ಚದ ರಸ್ತೆ ಕಾಮಗಾರಿ , ಮಧುಗಿರಿ ಸಮೀಪ ವಡೇರಹಳ್ಳಿಯಲ್ಲಿ 6.35 ಎಕರೆ ವಿಸ್ತೀರ್ಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ಡಿಪೋ, ಬಡವನಹಳ್ಳಿ ಮೊರಾರ್ಜಿ ವಸತಿ ಶಾಲೆ, ಬೇಡತ್ತೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಶಂಕುಸ್ಥಾಪನೆ ನೆರವೇರಲಿದೆ.