ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ನಮ್ಮ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದೆ. ಜೊತೆಗೆ ಸಾಮಾಜಿಕವಾಗಿ ಸಕ್ರಿಯರಾಗಿರುವ ಮಹಿಳೆಯರಿಗೆ ಎಚ್ಚರಿಕೆಯನ್ನೂ ಕೊಡುತ್ತಿದೆ.
ನಮ್ಮಂತಹ ಸಾಮಾನ್ಯ, ಸದ್ಗೃಹಸ್ಥ ನಾಗರಿಕರಿಗೆ ಕಲಾವಿದರ ಬಗ್ಗೆ, ಮಠಗಳ ಬಗ್ಗೆ ಸಮಾನ ಗೌರವವಿದೆ. ಆದರೆ ಇಂಥ ಪ್ರಕರಣಗಳು ಅಂತ್ಯ ಕಾಣದೇ ಹೋದರೆ ತಪ್ಪು ಸಂದೇಶವೊಂದು ಸಮಾಜಕ್ಕೆ ರವಾನೆಯಾಗುವ ಅಪಾಯ ಇದೆ. ಆದ್ದರಿಂದ ಈ ಪ್ರಕರಣದ ವಿಲೇವಾರಿಯಲ್ಲಿ ಭಾಗಿಯಾಗಿರುವ ಎಲ್ಲರೂ ಅನಗತ್ಯ ವಿಳಂಬವನ್ನು ತಪ್ಪಿಸಿ ಆದಷ್ಟು ಬೇಗ ಪ್ರಕರಣಕ್ಕೆ ಇತಿಶ್ರೀ ಹೇಳಬೇಕು.
ಇಂಥ ಪ್ರಕರಣಗಳನ್ನು ಮಾಧ್ಯಮಗಳು ರಂಜನೀಯವಾಗಿ ತೋರಿಸುತ್ತಿವೆ. ನಿಜ, ಅವರಿಗೆ ಅದೊಂದು ಒಳ್ಳೆಯ ಸುದ್ದಿ. ಆದರೆ ಮನೆಗಳಲ್ಲಿ ಇದನ್ನು ನೋಡುವ ಮಕ್ಕಳ ಪ್ರಶ್ನೆಗಳಿಗೆ ನಾವು ಏನೆಂದು ಉತ್ತರ ಕೊಡೋಣ? ಅವರಲ್ಲಿ ನೈತಿಕ, ಧಾರ್ಮಿಕ ಪ್ರಜ್ಞೆ ಬೆಳೆಯುವುದಾದರೂ ಹೇಗೆ? ಸರ್ಕಾರ ಹಾಗೂ ನ್ಯಾಯಾಲಯ ಧಾರ್ಮಿಕ ಸೂಕ್ಷ್ಮವನ್ನು, ಸಾಮಾಜಿಕ ಸ್ವಾಸ್ಥ್ಯವನ್ನು ಪರಿಗಣಿಸಿ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಸಾಮಾನ್ಯ ನಾಗರಿಕರಿಗೆ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕು.