ಬೆಂಗಳೂರು/ರಾಮನಗರ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಮೇಲೆ ನೆರೆಮನೆಯ 16 ವರ್ಷದ ಬಾಲಕ ಅತ್ಯಾಚಾರ ಎಸಗಿರುವ ಘಟನೆ ತಲಘಟ್ಟಪುರ ಸಮೀಪದ ತಟ್ಟಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
‘ಜುಲೈ 17ರಂದು ಬಿಸ್ಕತ್ ಕೊಡುವ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದ ಬಾಲಕ, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಈ ವಿಷಯ ಪೋಷಕರ ಗಮನಕ್ಕೆ ಬಂದಿರಲಿಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಜುಲೈ 20ರಂದು ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ತಿಳಿಸಿದರು.
‘ಬಾಲಕಿಯ ಗುಪ್ತಾಂಗ ಮತ್ತು ಕಾಲಿನ ಮೇಲೆ ಕಚ್ಚಿದ ಗಾಯದ ಗುರುತುಗಳಿವೆ. ಅತ್ಯಾಚಾರ ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಈ ಸಂಗತಿ ತಿಳಿದು ಆತಂಕಗೊಂಡ ಪೋಷಕರು, ಜುಲೈ 21ರಂದು ತಲಘಟ್ಟಪುರ ಠಾಣೆಗೆ ದೂರು ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟಿದ್ದ ಆರೋಪಿ, ಪೋಲಿ ಹುಡುಗರ ಜತೆ ಬೀದಿ ಸುತ್ತುತ್ತಾನೆ. ಘಟನಾ ದಿನ ಆತ ಮನೆ ಬಳಿ ಬಂದಾಗ ಬಾಲಕಿ ಒಬ್ಬಳೇ ಆಟಆಡುತ್ತಿರುವುದನ್ನು ಕಂಡಿದ್ದಾನೆ. ನಂತರ ಹತ್ತಿರ ಹೋಗಿ ಬಿಸ್ಕತ್ ಕೊಡುವುದಾಗಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಆಟವಾಡುತ್ತಿದ್ದ ಮಗಳು ಏಕಾಏಕಿ ನಾಪತ್ತೆಯಾಗಿದ್ದರಿಂದ ಅನುಮಾನಗೊಂಡ ತಾಯಿ, ಅಕ್ಕ–ಪಕ್ಕದ ಮನೆಗಳಲ್ಲೆಲ್ಲ ಹುಡುಕಾಟ ಆರಂಭಿಸಿದ್ದರು. ಆಗ ಆರೋಪಿಯ ಮನೆಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು. ಆದರೆ, ಬಾಲಕ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ತಾಯಿ, ಮಗಳ ಕೆನ್ನೆಗೇ ಹೊಡೆದು ಮನೆಗೆ ಕರೆದೊಯ್ದಿದ್ದರು. ಆದರೆ, ಅತ್ಯಾಚಾರ ನಡೆದಿರುವ ಸಂಗತಿ ಗೊತ್ತಾದ ಬಳಿಕ ಅವರು ಈ ಬಗ್ಗೆ ಮಗಳ ಬಳಿ ವಿಚಾರಿಸಿದ್ದಾರೆ. ಆಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಪ್ರಕರಣ ಬೆಳಕಿಗೆ ಬಂದ ನಂತರ ಘಟನೆ ಸಂಬಂಧ ಆರೋಪಿ ಬಾಲಕನ ಪೋಷಕರು ಮತ್ತು ಗ್ರಾಮದ ಮುಖಂಡರು ಸಂಧಾನದ ಮಾತುಕತೆ ನಡೆಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಬಾಲಕಿಯ ಪೋಷಕರ ಒಪ್ಪಿಗೆ ಪಡೆದು ಆರೋಪಿ ವಿರುದ್ಧ ಅತ್ಯಾಚಾರ (ಐಪಿಸಿ 376) ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2012 (ಪೋಸ್ಕೊ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಆತನ ಪತ್ತೆಗೆ ಸಿಪಿಐ ಸಂಪತ್ ಕುಮಾರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.