ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ೨ಜಿ ಹಗರಣದ ಆರೋಪಿಗಳನ್ನು ರಕ್ಷಿಸಿದ್ದಾರೆ ಎಂಬ ಆರೋಪದ ಮೂಲವನ್ನು ಬಹಿರಂಗಪಡಿಸುವಂತೆ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.
‘ಸಿನ್ಹಾ ನಿವಾಸದ ಸಂದರ್ಶಕರ ಪಟ್ಟಿ ಹಾಗೂ ಸಿಬಿಐ ದಾಖಲೆಗಳನ್ನು ನಿಮಗೆ ಕೊಟ್ಟವರ ಹೆಸರನ್ನು ತಿಳಿಸಿ’ ಎಂದೂ ನ್ಯಾ. ಎಚ್.ಎಲ್. ದತ್ತು ಅವರಿದ್ದ ಪೀಠ ಭೂಷಣ್ ಅವರಿಗೆ ಆದೇಶಿಸಿದೆ.
‘ಮುಂದಿನ ವಿಚಾರಣೆಯ ವೇಳೆ ಭೂಷಣ್ ಅವರು ಮುಚ್ಚಿದ ಲಕೋಟೆಯಲ್ಲಿ ಈ ಮಾಹಿತಿಯನ್ನು ಕೋರ್ಟ್ಗೆ ಸಲ್ಲಿಸಬೇಕು. ಮಾಹಿತಿ ಮೂಲವನ್ನು ತಿಳಿದ ಬಳಿಕ ಆರೋಪ ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಭೂಷಣ್ ಸಲ್ಲಿಸಿರುವ ಪ್ರಮಾಣಪತ್ರ ಸುಪ್ರೀಂಕೋರ್ಟ್ ನಿಯಮಕ್ಕೆ ಅನುಗುಣವಾಗಿಲ್ಲ. ಎಲ್ಲಿಂದ ಈ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನೂ ಭೂಷಣ್ ಬಹಿರಂಗಪಡಿಸಬೇಕು’ ಎಂದು ಪೀಠ ಹೇಳಿದೆ.
‘ಯಾರೋ ಮೂರನೆಯವರು ಈ ಪ್ರಕರಣದ ವಿಚಾರಣೆಯನ್ನು ನಿಯಂತ್ರಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಮುಂದೆ ಪ್ರಶಾಂತ್ ಭೂಷಣ್ ಅವರು ಸಿಬಿಐ ನಿರ್ದೇಶಕರ ಸಂದರ್ಶಕರ ಪಟ್ಟಿಯ ಮೂಲ ದಾಖಲೆಯನ್ನು ಸಲ್ಲಿಸಲಿದ್ದಾರೆ ಎಂದು ಮಾಧ್ಯಮದಲ್ಲಿ ವರದಿ ಬಂದಿದ್ದಾದರೂ ಹೇಗೆ’ ಎಂದು ಸಿನ್ಹಾ ಪರ ಹಾಜರಿದ್ದ ವಕೀಲ ವಿಕಾಸ್ ಸಿಂಗ್ ಪ್ರಶ್ನಿಸಿದರು. ‘ಈ ಎಲ್ಲ ವಿವಾದಗಳ ಹಿಂದೆ ಕಾರ್ಪೊರೇಟ್ ಸಂಸ್ಥೆಯೊಂದರ ಕಿತಾಪತಿ ಇದೆ. ೨ಜಿ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿದೆ’ ಎಂದೂ ವಾದಿಸಿದರು. ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಈ ತಿಂಗಳ ೨೨ಕ್ಕೆ ನಿಗದಿ ಮಾಡಿತು.