ನವದೆಹಲಿ: ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ನಿರ್ಮಿಸುತ್ತಿರುವ ಅಣೆಕಟ್ಟೆ ತಮಿಳುನಾಡು ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದರಿಂದ ಕೂಡಲೇ ಮಧ್ಯ ಪ್ರವೇಶಿಸುವಂತೆ ಆ ರಾಜ್ಯದ ರೈತರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಆಗ್ರಹಿಸಿದೆ.
ಮೋದಿ ಅವರನ್ನು ಭೇಟಿ ಮಾಡಿದ್ದ ರೈತರ ನಿಯೋಗವು ಕಾವೇರಿಗೆ ಕರ್ನಾಟಕ ರಾಜ್ಯವು ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುತ್ತಿರುವುದರಿಂದ ತಮಿಳುನಾಡು ಅದರಲ್ಲೂ ನದಿ ಪಾತ್ರದ ರೈತರಿಗೆ ತೀವ್ರ ತೊಂದರೆಯಾಗಲಿದೆ ಎಂದು ವಿವರಿಸಿತು.
ಕರ್ನಾಟಕದ ಕ್ರಮದಿಂದ ನದಿ ಕೆಳಗಿನ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಲಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ರಾಜ್ಯಸಭೆ ಸದಸ್ಯ ಡಿ. ರಾಜ ಆರೋಪಿಸಿದರು.
ಕಾವೇರಿ ನ್ಯಾಯ ಮಂಡಳಿ ಐತೀರ್ಪು ಜಾರಿ ಮಾಡುವಂತೆಯೂ ನಿಯೋಗವು ಒತ್ತಾಯಿಸಿತು. ಐತೀರ್ಪಿನಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸುವಂತೆ ಶಿಫಾರಸು ಮಾಡಿದೆ. ಕೇಂದ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದೂ ಈ ನಿಯೋಗ ಆಗ್ರಹಿಸಿತು.
ಪ್ರಧಾನಿ ಭರವಸೆ: ರೈತರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪ್ರಧಾನಿ ಕೇಳಿಸಿಕೊಂಡರು. ಬೇಡಿಕೆ ಪರಿಶೀಲಿಸುವುದಾಗಿ ಭರವಸೆ ನೀಡಿದರು ಎಂದು ಡಿ. ರಾಜ ಪತ್ರಕರ್ತರಿಗೆ ತಿಳಿಸಿದರು. ಕಳೆದ ವಾರ ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ತಿರುಚಿ ಶಿವ, ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟೆ ಕಟ್ಟುತ್ತಿರುವ ವಿಷಯ ಪ್ರಸ್ತಾಪಿಸಿ, ಕೂಡಲೇ ಕರ್ನಾಟಕದ ಕ್ರಮವನ್ನು ತಡೆಯಬೇಕು ಎಂದು ಒತ್ತಾಯಿಸಿದ್ದರು.