ನವದೆಹಲಿ: ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ವಿರುದ್ಧ ಸಿಪಿಐನ ಹಿರಿಯ ಮುಖಂಡ ಗುರು ದಾಸ್ ದಾಸ್ಗುಪ್ತಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪ್ರತಿ ಎಂಎಂಬಿಟಿಯು ನೈಸರ್ಗಿಕ ಅನಿಲದ ಬೆಲೆಯನ್ನು 4.2 ಡಾಲರ್ನಿಂದ ೮.೪ ಡಾಲರ್ಗೆ ಏರಿಸಿರುವ ನಿರ್ಧಾರವನ್ನು ಚುನಾವಣೆ ಮುಗಿಯುವವರೆಗೆ ಜಾರಿಗೆ ತರಬಾರದು ಎಂಬ ಚುನಾವಣಾ ಆಯೋಗ ನೀಡಿರುವ ಸೂಚನೆಯನ್ನು ಮೊಯಿಲಿ ಧಿಕ್ಕರಿಸಿದ್ದಾರೆ ಎಂದು ದಾಸ್ಗುಪ್ತಾ ಆರೋಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರಿಗೆ ದಾಸ್ಗುಪ್ತಾ ದೂರು ಸಲ್ಲಿಸಿದ್ದಾರೆ.
ಆಯೋಗದ ಸೂಚನೆಯ ಬಗ್ಗೆ ಪೆಟ್ರೋಲಿಯಂ ಸಚಿವಾಲಯವು ರಿಲಯನ್ಸ್, ರಸಗೊಬ್ಬರ ಸಚಿವಾಲಯ ಮತ್ತು ಸಂಬಂಧಪಟ್ಟ ಇತರರಿಗೆ ಪತ್ರ ಬರೆದು ಮಾಹಿತಿ ನೀಡಿತ್ತು. ಆದರೆ ಅದನ್ನ ವಾಪಸ್ ಪಡೆದುಕೊಂಡಿರುವ ಮೊಯಿಲಿ ಅವರು ಮೇ ೧೭ರಿಂದಲೇ ಅಧಿಸೂಚನೆ ಜಾರಿಗೆ ಬರಲಿದೆ. ಇದು ಏಪ್ರಿಲ್ ೧ರಿಂದ ಪೂರ್ವಾನ್ವಯವಾಗಲಿದೆ ಎಂದು ಆದೇಶಿಸಿದ್ದಾರೆ ಎಂದು ದಾಸ್ಗುಪ್ತಾ ಹೇಳಿದ್ದಾರೆ.
ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿರುವ ಮೊಯಿಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ದಾಸ್ಗುಪ್ತಾ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.