ನವದೆಹಲಿ (ಪಿಟಿಐ/ಐಎಎನ್ಎಸ್): ಶಿಕ್ಷಕರ ದಿನವನ್ನು ‘ಗುರು ಉತ್ಸವ’ ಎಂದು ಆಚರಿಸುವ ಸರ್ಕಾರದ ನಿರ್ಧಾರ ಹಾಗೂ ಆ ದಿನ ವಿದ್ಯಾರ್ಥಿಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆ–ಸುವ ವಿಚಾರ ಈಗ ವಿವಾದದಲ್ಲಿ ಸಿಲುಕಿದೆ.
ವಿರೋಧ ಪಕ್ಷವಾದ ಕಾಂಗ್ರೆಸ್ ಜತೆ ಬಿಜೆಪಿಯ ಮಿತ್ರಪಕ್ಷಗಳಾದ ಎಂಡಿಎಂಕೆ ಹಾಗೂ ಪಿಎಂಕೆ ಸಹ ಸರ್ಕಾರದ ಈ ಕಾರ್ಯಕ್ರಮಕ್ಕೆ ತಕರಾರು ತೆಗೆದಿವೆ.
ಶಿಕ್ಷಕರ ದಿನಾಚರಣೆಗೆ ‘ಗುರು ಉತ್ಸವ‘ಎಂದು ಮರುನಾಮಕರಣ ಮಾಡಿರುವ ಆದೇಶ ವಾಪಸು ಪಡೆಯಬೇಕು ಎಂದು ಪಿಎಂಕೆಯ ಎಸ್. ರಾಮದಾಸ್ ಹಾಗೂ ಎಂಡಿಎಂಕೆಯ ವೈಕೊ ಒತ್ತಾಯಿಸಿದ್ದಾರೆ.
ಮಕ್ಕಳ ಜತೆ ಪ್ರಧಾನಿ ಸಂವಾದ ನಡೆಸುವುದು ಒಳ್ಳೆಯದೆ ಆದರೂ ಎಲ್ಲ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳಿಗೆ ಉತ್ತೇಜನ ನೀಡಿದಾಗ ಮಾತ್ರ ರಾಷ್ಟ್ರೀಯ ಭಾವೈಕ್ಯ ಸಾಧ್ಯವಾಗುತ್ತದೆ ಎಂದು ರಾಮದಾಸ್ ‘ಗುರು ಉತ್ಸವ’ ಎಂಬ ಹೆಸರಿಗೆ ತಕರಾರು ತೆಗೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಆಲಿಸುವುದು ಕಡ್ಡಾಯವಲ್ಲ. ಅದು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
‘ಶಿಕ್ಷಕರ ದಿನಾಚರಣೆಯ ಹೆಸರನ್ನು ನಾವು ಬದಲಿಸಿಲ್ಲ. ‘‘ಗುರು ಉತ್ಸವ’’ ಎಂಬ ಹೆಸರಿನಲ್ಲಿ ಶಿಕ್ಷಕರ ಮಹತ್ವ ಸಾರುವ ಪ್ರಬಂಧ ಸ್ಪರ್ಧೆಗೆ ಈ ಹೆಸರು ನೀಡಲಾಗಿದೆ. ಈ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಯಾರಿಗಾದರೂ ಅನ್ನಿಸಿದಲ್ಲಿ ಅದು ವಿಷಾದಕರ’ ಎಂದೂ ಇರಾನಿ ಹೇಳಿದ್ದಾರೆ.
ಸೆಪ್ಟೆಂಬರ್ 5ರಂದು ಪ್ರಧಾನಿ ಮೋದಿ ದೆಹಲಿಯ ಮಾಣೆಕ್ಷಾ ಸಭಾಂಗಣದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಆನಂತರ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದೇಶದಾದ್ಯಂತ 18 ಲಕ್ಷ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಭಾಷಣದ ನೇರ ಪ್ರಸಾರ ಮಾಡಲಾಗುತ್ತದೆ. ವಿಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ದೇಶದ ಯಾವುದೇ ಭಾಗದ ವಿದ್ಯಾರ್ಥಿಯೂ ಪ್ರಧಾನಿಗೆ ಪ್ರಶ್ನೆ ಕೇಳಬಹುದಾಗಿದೆ.
ಈ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4.45ರವರೆಗೆ ನಡೆಯಲಿರುವುದರಿಂದ ಈ ಕುರಿತೂ ಕೆಲ ಶಾಲೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಮಧ್ಯಾಹ್ನದ ನಂತರ ಶಾಲಾ ಅವಧಿ ಮುಕ್ತಾಯವಾಗುವುದರಿಂದ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕಾಗಿ ಶಾಲೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂದು ಆಡಳಿತ ವರ್ಗಗಳು ತಕರಾರು ಎತ್ತಿವೆ. ಪಶ್ಚಿಮಬಂಗಾಳ ಸೇರಿದಂತೆ ಕೆಲ ರಾಜ್ಯಗಳು ಈ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲು ಇನ್ನಷ್ಟು ಕಾಲಾವಕಾಶ ಬೇಕಿತ್ತು ಎಂದು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.