ಹಜಾರಿಬಾಗ್(ಪಿಟಿಐ): ಜಾರ್ಖಂಡ್ ವಿದ್ಯುತ್ ಮಂಡಳಿಯ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜಾಮೀನು ಪಡೆಯಲು ನಿರಾಕರಿಸಿದ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಮತ್ತು ಇತರ 54 ಮಂದಿಯನ್ನು ಸ್ಥಳೀಯ ನ್ಯಾಯಾಲಯವೊಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾರ್ಖಂಡ್ ವಿದ್ಯುತ್ ಮಂಡಳಿಯ ಹಜಾರಿಬಾಗ್ ಶಾಖೆಯ ಪ್ರಧಾನ ವ್ಯವಸ್ಥಾಪಕ ಧನೇಶ್ ಝಾ ನೀಡಿದ ದೂರಿನ ಆಧಾರದಲ್ಲಿ ಸಿನ್ಹಾ ಮತ್ತು ಇತರರನ್ನು ಸೋಮವಾರ ಬಂಧಿಸಲಾಗಿತ್ತು. ವಿದ್ಯುತ್ ಕಡಿತ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ತಮ್ಮನ್ನು ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಝಾ ದೂರು ನೀಡಿದ್ದರು.
ಝಾ ಅವರನ್ನು ಕಟ್ಟಿ ಹಾಕಲು ಪಕ್ಷದ ಕಾರ್ಯಕರ್ತೆಯರಿಗೆ ಸೂಚನೆ ನೀಡಿರುವುದನ್ನು ಸಿನ್ಹಾ ಅವರು ಸೋಮವಾರ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದರು.
ಮಹಿಳೆಯರು ಕಟ್ಟಿ ಹಾಕಿದ್ದ ಝಾ ಅವರನ್ನು ನಂತರ ಪೊಲೀಸರು ಬಿಡಿಸಿದ್ದರು.