ನವದೆಹಲಿ (ಪಿಟಿಐ): ಇಲ್ಲಿಯ ಜಾಮಾ ಮಸೀದಿ ಮೇಲೆ ದಾಳಿ ನಡೆಸಿದ ಆರೋಪದಡಿ ಇಂಡಿಯನ್ ಮಜಾಹಿದೀನ್ (ಐಎಂ) ಸಹ ಸಂಸ್ಥಾಪಕ ಯಾಸೀನ್ ಭಟ್ಕಳ ಹಾಗೂ ಆತನ ಸಹಚರ ಅಸಾದುಲ್ಲ ಅಖ್ತರ್ ವಿರುದ್ಧ ದೆಹಲಿ ಪೊಲೀಸರು ಗುರುವಾರ ಸ್ಥಳೀಯ ಕೋರ್ಟ್ನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಐತಿಹಾಸಿಕ ಜಾಮಾ ಮಸೀದಿ ಮೇಲೆ 2010ರ ಸೆ. 19ರಂದು ದಾಳಿ ನಡೆಸಲಾಗಿತ್ತು. ಯಾಸಿನ್ ತಾನೇ ಸಿದ್ಧಪಡಿಸಿದ ಬಾಂಬ್ ಅನ್ನು ಮಸೀದಿ ಬಳಿ ಕಾರಿನಲ್ಲಿ ಅಡಗಿಸಿ ಇಟ್ಟಿದ್ದ.ಭಾರತ–ನೇಪಾಳ ಗಡಿಯಲ್ಲಿ ಯಾಸೀನ್ ಹಾಗೂ ಆತನ ಸಹಚರನನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಸಿಬ್ಬಂದಿ ಕಳೆದ ವರ್ಷದ ಆ. 28ರಂದು ಬಂಧಿಸಿದ್ದರು. ಈ ಸಂಬಂಧದ ವಿಚಾರಣೆಯನ್ನು ಕೋರ್ಟ್ ಇದೇ 22ರಂದು ನಡೆಸಲಿದೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಮುಜಫ್ಫರ್ನಗರ (ಪಿಟಿಐ): ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ನಾಲ್ಕು ಮಂದಿ, ಹದಿನೈದು ವರ್ಷದ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಸಹರಾನ್ಪುರ ಜಿಲ್ಲೆಯ ಕೊಟ್ವಾಲಿ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ.
‘ಬುಧವಾರವೇ ಬಾಲಕಿಯನ್ನು ಅಪಹರಿಸಿದ್ದ ಆರೋಪಿಗಳು ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣದ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಮೂವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ರಘುವೀರ್ ಲಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಝೀ’ ವಿರುದ್ಧ ಕ್ರಮಕ್ಕೆ ಜಿಂದಾಲ್್ ಆಗ್ರಹ
ನವದೆಹಲಿ (ಐಎಎನ್ಎಸ್): ಝೀ ಸುದ್ದಿ ವಾಹಿನಿ ಸಂಪಾದಕ ಸುಭಾಷ್ಚಂದ್ರ ವಿರುದ್ಧದ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಉದ್ಯಮಿ, ಕಾಂಗ್ರೆಸ್್ ಮುಖಂಡ ನವೀನ್್ ಜಿಂದಾಲ್ ಅವರು ದೆಹಲಿ ಪೊಲೀಸರನ್ನು ಗುರುವಾರ ಒತ್ತಾಯಿಸಿದ್ದಾರೆ.
‘ನಮಗೆ ಹಣ ಕೊಟ್ಟರೆ ಜಿಂದಾಲ್್ ಸಮೂಹವನ್ನು ತೇಜೋವಧೆ ಮಾಡುವಂಥ ವರದಿಗಳನ್ನು ಪ್ರಸಾರ ಮಾಡುವುದಿಲ್ಲ’ ಎಂದು ಝೀ ಸಂಪಾದಕರು, ಜಿಂದಾಲ್್ ಕಂಪೆನಿಯ ಅಧಿಕಾರಿಗಳ ಜತೆ ವ್ಯವಹಾರ ಕುದುರಿಸುತ್ತಿದ್ದ ದೃಶ್ಯವನ್ನು ಒಳಗೊಂಡ ಸಿ.ಡಿಯೊಂದನ್ನು ನವೀನ್್ ಜಿಂದಾಲ್್ ಅವರು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.