ಬೆಂಗಳೂರು: ಕೋರಮಂಗಲ ನಾಲ್ಕನೇ ಬ್ಲಾಕ್ನಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಮಾರಾಟ ಮಾಡುವ ಯತ್ನದಲ್ಲಿದ್ದ ಚೀನಾ ದೇಶದ ಪ್ರಜೆ ಸೇರಿದಂತೆ ನಾಲ್ಕು ಮಂದಿಯನ್ನು ಆಗ್ನೇಯ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚೀನಾದ ಮಕ್ಕಿಜಿಯಾಂಗ್ (25), ಬನಶಂಕರಿಯ ಪಾರ್ಥಸಾರಥಿ (45), ಮಂಡ್ಯದ ಸುನೀಲ್ಕುಮಾರ್ (33)
ಹಾಗೂ ವರುಣ್ (33) ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಹೊಸಕೋಟೆಯ ಸೈಯದ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶದಿಂದ ಮರದ ತುಂಡುಗಳನ್ನು ಕದ್ದು ತಂದಿದ್ದ ಆರೋಪಿಗಳು, ಕೋರಮಂಗಲದಲ್ಲಿ ಗಿರಾಕಿಗಳನ್ನು ಹುಡುಕುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₨ 1.25 ಲಕ್ಷ ಮೌಲ್ಯದ ರಕ್ತಚಂದನದ ತುಂಡುಗಳು, ಕಾರು ಹಾಗೂ 9 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.