ಮಡಿಕೇರಿ: ಅರಣ್ಯ ಸಚಿವ ರಮಾನಾಥ್ ರೈ ಅವರ ಪುತ್ರ ದೀಪಕ್ ಹಾಗೂ ಆತನ ಮೂವರು ಸ್ನೇಹಿತರು ಮದ್ಯದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ, ಬುದ್ಧಿ ಹೇಳಿದ ಕಾಫಿ ತೋಟದ ಮಾಲೀಕನೊಂದಿಗೆ ಗಲಾಟೆ ನಡೆಸಿದ ಘಟನೆ ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿ ಭಾನುವಾರ ನಡೆದಿದೆ.
ಸಮೀಪದ ಮಂದೇಮಾಡ ತೇಜ ಅವರ ಕಾಫಿ ಎಸ್ಟೇಟ್ ಪಕ್ಕದ ರಸ್ತೆಯಲ್ಲಿ ಕೆಎ 19 ಎಂಬಿ 199 ಸಂಖ್ಯೆಯ ಇನೊವಾ ಕಾರು ನಿಲ್ಲಿಸಿಕೊಂಡು ನಾಲ್ವರು ಮದ್ಯ ಸೇವಿಸುತ್ತಾ ಕೇಕೆ ಹಾಕುತ್ತಿದ್ದರು.
ಇದನ್ನು ಗಮನಿಸಿದ ತೇಜ ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಆದರೆ, ಮಾಲೀಕನ ಜತೆಗೆ ಗಲಾಟೆ ನಡೆಸಿದ ದೀಪಕ್, ‘ನಾನು ಸಚಿವರ ಪುತ್ರ; ಏನ್ ಮಾಡ್ತೀರಾ ನೋಡೋಣ?’ ಎಂದು ಗದರಿದ್ದಾರೆ.
ಆಗ ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಸಮಾಧಾನಪಡಿಸಲು ಯತ್ನಿಸಿದ್ದಾರೆ. ದೀಪಕ್ ಹಾಗೂ ಸ್ನೇಹಿತರು ಸಾರ್ವಜನಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದಾರೆ. ಬಳಿಕ ಸ್ಥಳದಲ್ಲಿದ್ದವರು ಇಬ್ಬರು ಯುವಕರನ್ನು ಹಿಡಿದು ಪೊಲೀ ಸರಿಗೆ ಒಪ್ಪಿಸಿದರೆ, ಮತ್ತಿಬ್ಬರು ಸ್ಥಳದಿಂದ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ಬಳಿಕ ಶ್ರೀಮಂಗಲ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಅವರು ತೇಜ ಹಾಗೂ ದೀಪಕ್ನನ್ನು ಠಾಣೆಗೆ ಕರೆಸಿ ಸಂಧಾನ ನಡೆಸಿ ಕಳುಹಿ ಸಿದ್ದಾರೆ ಎಂದು ಮೂಲಗಳು ತಿಳಿಸಿವೆ.