ಸಂಜೆ 6:15ರ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅವರು, ಸುಮಾರು 20 ನಿಮಿಷಗಳ ಕಾಲ ಧರಣಿ ನಿರತರ ಜತೆ ಮಾತುಕತೆ ನಡೆಸಿ, ಅವರ ಮನವೊಲಿಸುವ ಪ್ರಯತ್ನ ನಡೆಸಿದರು.
ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ ಮತ್ತು ಸಂಬಂಧಿಕರ ಜತೆಗೆ ಮಾತನಾಡಿದ ಅವರು, ‘ಸಿಐಡಿ’ಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂದು ಪೋಷಕರು ಪಟ್ಟು ಹಿಡಿದರು. ಬುಧವಾರದೊಳಗೆ ಮರಣೋತ್ತರ ಪರೀಕ್ಷೆ ವರದಿ ಲಭಿಸಲಿದ್ದು, ಸಾವಿನ ನಿಖರ ಕಾರಣ ತಿಳಿಯಲಿದೆ. ಆ ನಂತರ ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಆದರೆ, ಪೊಷಕರು ಸಿದ್ದರಾಮಯ್ಯ ಅವರ ಮಾತನ್ನು ಒಪ್ಪಲಿಲ್ಲ. ರಾಜ್ಯ ಪೊಲೀಸರ ತನಿಖೆ ಕುರಿತು ತಮಗೆ ವಿಶ್ವಾಸ ಇಲ್ಲ. ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
‘ಮಗನ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಸಿಬಿಐನಿಂದ ಮಾತ್ರ ನಮಗೆ ನ್ಯಾಯ ಸಿಗಲಿದೆ’ ಎಂದು ರವಿ ಅವರ ತಾಯಿ ಗೌರಮ್ಮ ಹೇಳಿದರು.