ಬೆಂಗಳೂರು: ಕನ್ನಡ ಸಾಹಿತ್ಯಿಕ ಲೋಕಕ್ಕೆ ಪ್ರತಿ ವರ್ಷವೂ ಹೊಸ ಪ್ರತಿಭೆಗಳನ್ನು ಪರಿಚಯಿಸುವ ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ–2014’ರ ಕಥಾಸ್ಪರ್ಧೆ – ಕಾವ್ಯಸ್ಪರ್ಧೆಗಳಿಗೆ ಪ್ರತಿ ವರ್ಷದಂತೆ ಈ ಸಲವೂ ಅತ್ಯುತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡೂ ವಿಭಾಗಗಳಲ್ಲಿ ಲೇಖಕಿಯರ ರಚನೆಗಳೇ ಮುಂಚೂಣಿಯಲ್ಲಿವೆ.
ಕಥಾಸ್ಪರ್ಧೆಯಲ್ಲಿ ಕೆ.ಎಂ. ರಶ್ಮಿ ಅವರ ‘ಅದು’ ಹಾಗೂ ಕಾವ್ಯಸ್ಪರ್ಧೆಯಲ್ಲಿ ವೀಣಾ ಬಡಿಗೇರ್ ಅವರ ‘ಈ ಶತಮಾನದ ಮಾದರಿ ಹೆಣ್ಣು’ ಮೊದಲ ಬಹುಮಾನ ಪಡೆದಿವೆ.
ಆನಂದ್ ಗೋಪಾಲ್ ಅವರ ‘ರೂಪ ರೂಪಗಳನು ದಾಟಿ’ ಹಾಗೂ ಅರವಿಂದ ಮಿತ್ರ ಅವರ ‘ಗ್ಯಾಲರಿ’ ಕಥೆಗಳು ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ. ಆರ್.ಕೆ. ಪ್ರಸಾದ್ ಶೆಣೈ ಅವರ ‘ಲೂಲು ಟ್ರಾವೆಲ್ಸ್’ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದಿದೆ.
ಪ್ರಜ್ಞಾ ಮತ್ತೀಹಳ್ಳಿ (ಆಕಾಶಕ್ಕೊಂದೇ ಮೆಟ್ಟಿಲು), ಕರ್ಕಿ ಕೃಷ್ಣಮೂರ್ತಿ (ಉತ್ಸರ್ಗ), ಕೆ. ಶ್ರೀನಿಧಿ (ಮೂರು ಹಿಡಿ ಅನ್ನ), ಎಸ್. ಗಂಗಾಧರಯ್ಯ (ಪದುಮದೊಳಗೆ ಬಿಂದು ಸಿಲುಕಿ) ಹಾಗೂ ಎಚ್.ಬಿ. ಇಂದ್ರಕುಮಾರ್ (ಸಂಧಿ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ವಿಮರ್ಶಕಿ ಎಂ.ಎಸ್. ಆಶಾದೇವಿ ಹಾಗೂ ಕಥೆಗಾರ ವಿವೇಕ ಶಾನಭಾಗ ಈ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಕವನ ಸ್ಪರ್ಧೆಯಲ್ಲಿ ಪ್ರಜ್ಞಾ ಮತ್ತೀಹಳ್ಳಿ ಅವರ ‘ತಲೆಮಾರು’ ಹಾಗೂ ಸ್ಮಿತಾ ಮಾಕಳ್ಳಿ ಅವರ ‘ಕತ್ತಲು ಮಾತನಾಡುವುದಿಲ್ಲ’ ಕವಿತೆಗಳು ಎರಡನೇ ಮತ್ತು ಮೂರನೇ ಬಹುಮಾನ ಪಡೆದಿವೆ. ವಿದ್ಯಾರ್ಥಿ ವಿಭಾಗದಲ್ಲಿ ಮಹಾಂತೇಶ ಪಾಟೀಲ ಅವರ ‘ಚೂಡಿದಾರದ ಸುತ್ತಲ ಸೂಜಿಗಳು’ ಕವಿತೆಗೆ ಬಹುಮಾನ ದೊರೆತಿದೆ. ಪಿ.ಬಿ. ಪ್ರಸನ್ನ (ಮಂಗಳದ ಹಾಡು ಮರೆತಿದ್ದಾರೆ), ರೇಣುಕಾ ನಿಡಗುಂದಿ (ಬಿಟ್ಟು ಹೋದವನು), ಮಾಧವಿ ಭಂಡಾರಿ ಕೆರೆಕೋಣ (ಹೊದ್ಲು ಅರಳುವ ಪರಿ), ವಾಸುದೇವ ನಾಡಿಗ್ (ಜಗಕೆ ಅನಾಕರ್ಷಕನಾಗುವ ಸುಖ) ಹಾಗೂ ಎಂ.ಎಸ್. ಶೇಖರ್ (ಸವ್ವಾ ಸವಾಲು ಹುಟ್ಟಿದ ದಿನ) ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಹಿರಿಯ ಕವಿಗಳಾದ ಸವಿತಾ ನಾಗಭೂಷಣ ಮತ್ತು ಎಸ್. ಮಂಜುನಾಥ್ ಈ ಸ್ಪರ್ಧೆಯ ನಿರ್ಣಾಯಕರು.
ಬಹುಮಾನದ ಮೊತ್ತ: ಮೊದಲ ಮೂರು ಸ್ಥಾನ ಪಡೆದ ಕಥೆಗಳು ಕ್ರಮವಾಗಿ ರೂ. 20,000, ರೂ. 15,000 ಹಾಗೂ ರೂ. 10,000 ನಗದು ಬಹುಮಾನ ಪಡೆಯಲಿವೆ. ಕವನಸ್ಪರ್ಧೆ ವಿಭಾಗದಲ್ಲಿನ ಮೊದಲ ಮೂರು ಕವಿತೆಗಳಿಗೆ ಕ್ರಮವಾಗಿ ರೂ.5,000, ರೂ. 3,000 ಹಾಗೂ ರೂ. 2,000 ಬಹುಮಾನ ದೊರೆಯಲಿದೆ. ವಿದ್ಯಾರ್ಥಿ ವಿಭಾಗದಲ್ಲಿನ ಬಹುಮಾನಿತ ಕಥೆ – ಕವಿತೆಗಳಿಗೆ ಕ್ರಮವಾಗಿ ರೂ. 5000 ಹಾಗೂ ರೂ. 2000 ಬಹುಮಾನ ದೊರೆಯಲಿದೆ.
ಮಕ್ಕಳ ವರ್ಣಚಿತ್ರ ಸ್ಪರ್ಧೆ: ಎಸ್. ಬಂಡೇಶ್ (ಎನ್. ಗಣೇಕಲ್, ದೇವದುರ್ಗ), ಮಾರುತಿ ರಾಜಶೇಖರ ಪಾಯಣ್ಣವರ (ಹೀರೇಮನವಳ್ಳಿ, ಖಾನಾಪುರ), ಯಶ್ವಿ ಜೆ.ರೈ. (ಶಿವಮೊಗ್ಗ), ಅತುಲ್ಯ ಎಂ. ಪಂಡಿತ್ (ಮೂಡಬಿದರೆ), ಅರ್ಣವ್ (ಬೆಂಗಳೂರು), ಆಕಾಶ್ (ಮಾನ್ವಿ), ಸನತ್ ರಾಘವ ಯು. (ಕೊಂಬೆಟ್ಟು, ಪುತ್ತೂರು) ಹಾಗೂ ಪ್ರಥಮ್ ಕಾಮತ್ (ಕಟ್ಪಾಡಿ, ಉಡುಪಿ) ಅವರ ಚಿತ್ರಗಳು ‘ಮಕ್ಕಳ ವರ್ಣಚಿತ್ರ ಸ್ಪರ್ಧೆ’ಯಲ್ಲಿ ಬಹುಮಾನ ಪಡೆದಿವೆ. ಸಂಧ್ಯಾ ಅಣ್ಣಯ್ಯ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಬಹುಮಾನ ವಿತರಣೆ: ಅಕ್ಟೋಬರ್ 18ರ ಶನಿವಾರ ತುಮಕೂರಿನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಹಿರಿಯ ಲೇಖಕ ಡಾ. ಬರಗೂರು ರಾಮಚಂದ್ರಪ್ಪ ಹಾಗೂ ತುಮಕೂರು ವಿಶ್ಚವಿದ್ಯಾಲಯದ ಕುಲಪತಿ ಡಾ. ರಾಜಾಸಾಬ್ ಅವರು ಅತಿಥಿಗಳಾಗಿ ಭಾಗವಹಿಸುವರು.
ತೀರ್ಪುಗಾರರ ಟಿಪ್ಪಣಿಗಳು
‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಯ ಬಗ್ಗೆ ನಮ್ಮಲ್ಲಿ ಕುತೂಹಲ ಯಾಕೆಂದರೆ, ನಮ್ಮ ಪರಿಸರದ ಬದಲಾಗುತ್ತಿರುವ ಚಲನೆಗಳ, ಗ್ರಹಿಕೆಗಳ ಸುಳಿವುಗಳು ಹೊಸ ರೂಪಕಗಳಲ್ಲಿ, ನುಡಿಗಟ್ಟುಗಳಲ್ಲಿ, ಕಥನ ತಂತ್ರಗಳಲ್ಲಿ ಕಾಣಿಸುತ್ತದೆ ಎನ್ನುವ ಕಾರಣಕ್ಕೆ. –ಎಂ.ಎಸ್. - -ಆಶಾದೇವಿ
ಈ ಕವಿತೆಗಳ ಓದಿನಿಂದ ಒಂದು ಅಚ್ಚರಿ, ಒಂದು ಸಂತೋಷ ನಿಜವಾಗಿಯೂ ನನಗೆ ದೊರಕಿತು. ಈ ದಿವಸಗಳಲ್ಲಿ ಕವಿತಾ ಪ್ರವಾಹದಲ್ಲಿ ಕಸ–ಕಡ್ಡಿ, ಕೆಲವೊಮ್ಮೆ ಹೆಣಗಳನ್ನೂ ನೋಡಿ ದಿಗಿಲುಗೊಂಡಿದ್ದ ನನಗೆ ಅಪರೂಪದ ಪ್ರೇಮಪುಷ್ಪಗಳನ್ನೂ ನೋಡಿ ಸಂತಸವಾಯಿತು. – ಸವಿತಾ ನಾಗಭೂಷಣ
ಕೊನೆ ಸುತ್ತಿನಲ್ಲಿ ಓದಿದ ಬಹುತೇಕ ಕಥೆಗಳ ವಸ್ತುಗಳು ನಗರ,ಸಣ್ಣ ಪಟ್ಟಣಗಳ ಜೀವನದ ಸುತ್ತ ಇದ್ದವು. ದಲಿತ ಅಥವಾ ಕೆಳವರ್ಗದ ಅನುಭವಗಳನ್ನು ಶೋಧಿಸುವ, ಹಳ್ಳಿಯನ್ನು ಕೇಂದ್ರೀಕರಿಸಿದ ಕಥೆಗಳು ಕಡಿಮೆ. ಈ ಕಥಾಸ್ಪರ್ಧೆಯ ಇತಿಹಾಸ ಹಾಗೂ ಮಹತ್ವವನ್ನು ಗಮನದಲ್ಲಿಟ್ಟುಕೊಂಡಾಗ ಈ ಸಂಗತಿಯು ವಿಚಾರಯೋಗ್ಯವಾಗಿದೆಯೆನಿಸುತ್ತದೆ.
–ವಿವೇಕ ಶಾನಭಾಗ
ಒಟ್ಟಾರೆ ಈಗ ಕನ್ನಡದಲ್ಲಿ ಬರೆಯುತ್ತಿರುವ ಹೊಸ ಕವಿಗಳು ಅನುಭವವನ್ನು ಆಗಿಸಿಕೊಳ್ಳುವ ಪ್ರಕ್ರಿಯೆಯ ಮತ್ತು ಕವಿತೆಯ ಕಲೆಗಾರಿಕೆಯ ಬಗ್ಗೆ ಹೆಚ್ಚು ಲಕ್ಷ್ಯ ವಹಿಸುತ್ತಿಲ್ಲವೆಂದೇ ನನಗನ್ನಿಸಿತು.
–ಎಸ್. ಮಂಜುನಾಥ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.