ಕಳೆದ ಶುಕ್ರವಾರ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣಿಸುವಾಗ ಮಧ್ಯೆ ನಿಲ್ದಾಣವೊಂದರಲ್ಲಿ ನಿತ್ಯ ಪ್ರಯಾಣಿಸುವ ಗುಂಪೊಂದು ಹತ್ತಿತು. ಮುಂದಿನ ನಿಲ್ದಾಣಗಳಲ್ಲಿ ಇನ್ನಷ್ಟು ಮಂದಿ ಅವರನ್ನು ಸೇರಿಕೊಂಡರು. ಅವರೆಲ್ಲ ಬೋಗಿಯನ್ನು ಅಲಂಕರಿಸಿದರು. ಕಿಟಕಿಯ ಪಕ್ಕ ಓದುತ್ತಾ ಕುಳಿತಿದ್ದ ನನ್ನನ್ನು ಎದ್ದು ಬೇರೆಡೆ ಕೂರುವಂತೆ ಕೇಳಿದರು. ನನ್ನ ಎದುರಿನ ಆಸನ ಖಾಲಿ ಇತ್ತು.
ಅಲ್ಲಿ ಕುಳಿತುಕೊಳ್ಳಲು ಹೇಳಿದೆ. ಅವರು ಒಪ್ಪಲಿಲ್ಲ. ಆ ಜಾಗದಲ್ಲಿ ಕನ್ನಡ ತಾಯಿಯ ಚಿತ್ರಕ್ಕೆ ಪೂಜೆ ಮಾಡಿ ರಾಜ್ಯೋತ್ಸವ ಆಚರಿಸುವುದಾಗಿಯೂ, ನಾನು ಕುಳಿತಿದ್ದ ಜಾಗ ಪೂಜಾ ಸಾಮಗ್ರಿಗಳನ್ನು ಇರಿಸಲು ಬೇಕೆಂದೂ ಹೇಳಿದರು. ರಾಜ್ಯೋತ್ಸವವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಚರಿಸಬೇಕೆಂದೂ, ಪೂಜೆ ಇತ್ಯಾದಿ ಖಾಸಗಿ ಆಚರಣೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದೆಂದೂ ಹೇಳಿದೆ.
ಅವರು ನನ್ನ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎದ್ದು ಬೇರೆಡೆ ಕುಳಿತೆ. ಪೂಜೆ ಮಾಡಿ ಬೋಗಿಯಲ್ಲಿದ್ದವರಿಗೆಲ್ಲ ಪ್ರಸಾದ ಹಂಚಿದರು. ನಾನು ತೆಗೆದುಕೊಳ್ಳಲಿಲ್ಲ. ಅವರ ಪೂಜೆಯು ಕಚೇರಿಗಳಲ್ಲಿ ನಡೆಸುವ ಶುಕ್ರವಾರದ ಪೂಜೆಗಿಂತ ಭಿನ್ನವಾಗಿರಲಿಲ್ಲ. ಅದರಲ್ಲಿ ಕರ್ನಾಟಕ ರಾಜ್ಯೋತ್ಸವದ ಯಾವ ಲಕ್ಷಣವೂ ಇರಲಿಲ್ಲ.
ಪೂಜೆ ಬದಲು ಸಹ ಪ್ರಯಾಣಿಕರಿಗೆ ರಾಜ್ಯೋತ್ಸವದ ಸಿಹಿ ಹಂಚಿ ಕನ್ನಡ ಪತ್ರಿಕೆಗಳು, ನಿಯತಕಾಲಿಕಗಳು, ಪುಸ್ತಕಗಳನ್ನು ನೀಡಬಹುದು. ತಾವೂ ಓದಬಹುದು (ಇಳಿಯುವಾಗ ಬೇರೆಯವರು ಓದಲು ಸಾಧ್ಯವಾಗುವಂತೆ ಅವನ್ನು ಹಿಂದಕ್ಕೆ ಪಡೆಯ-ಬಹುದು). ಕನ್ನಡ ಭಾಷೆಯ ಬಗ್ಗೆ, ಕನ್ನಡಿಗರ ಬಗ್ಗೆ ಪ್ರೀತಿ ಹೆಚ್ಚಿಸುವ ಇತ್ಯಾತ್ಮಕ ಕಾರ್ಯಕ್ರಮಗಳನ್ನು ನಡೆಸುವುದು ಒಳ್ಳೆಯದಲ್ಲವೇ?
–ಪಂಡಿತಾರಾಧ್ಯ, ಮೈಸೂರು