ನವದೆಹಲಿ (ಪಿಟಿಐ): ಯೋಗಗುರು ರಾಮ್ದೇವ್ ಅವರಿಗೆ ಕೇಂದ್ರ ಸರ್ಕಾರ ‘ಜೆಡ್’ ಶ್ರೇಣಿಯ ಭದ್ರತೆ ಒದಗಿಸಿದೆ. ವಿರೋಧಿಗಳಿಂದ ಹಲ್ಲೆಗೆ ಒಳಗಾಗುವ ಸಂಭವ ಇರುವುದರಿಂದ ಭದ್ರತೆ ಒದಗಿಸಲಾಗಿದೆ ಎಂದು ಕೇಂದ್ರ ಹೇಳಿದೆ.
ಭದ್ರತಾ ಸಂಸ್ಥೆಗಳಿಂದ ಮಾಹಿತಿ ಪಡೆದುಕೊಂಡ ನಂತರ ಮತ್ತು ಅವರಿಗೆ ಇರುವ ಬೆದರಿಕೆಗಳ ವಿಶ್ಲೇಷಣೆ ನಡೆಸಿ ಗೃಹ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈತನಕ ಉತ್ತರಾಖಂಡ ರಾಜ್ಯದೊಳಗೆ ಮಾತ್ರ ಅವರಿಗೆ ‘ಜೆಡ್’ ಶ್ರೇಣಿ ಭದ್ರತೆಗೆ ಅವಕಾಶ ಇತ್ತು. ಉತ್ತರಾಖಂಡ ಸರ್ಕಾರ ಈ ಭದ್ರತೆ ಒದಗಿಸುವ ನಿರ್ಧಾರ ಕೈಗೊಂಡಿತ್ತು. ತಕ್ಷಣದಿಂದಲೇ ಅರೆ ಸೇನಾ ಪಡೆಯೊಂದರ ಕಮಾಂಡೊಗಳನ್ನು ರಾಮ್ದೇವ್ ಅವರ ರಕ್ಷಣೆಗೆ ನಿಯೋಜಿಸಲಾಗುವುದು. ದಿನದ 24 ಗಂಟೆಯೂ 40 ಸಿಬ್ಬಂದಿ ರಾಮ್ದೇವ್ ಅವರಿಗೆ ರಕ್ಷಣೆ ಒದಗಿಸಲಿದ್ದಾರೆ.
ಬಿಜೆಪಿಗೆ ನಿಕಟವಾಗಿರುವ ರಾಮ್ದೇವ್ ಅವರು ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.