ಜಮ್ಮು (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ, ‘ರಾಮ ಈ ದೇಶದ ಆತ್ಮ’ ಎಂದು ಹೇಳಿದ್ದಾರೆ.
ಫೈಜಾಬಾದ್ನಲ್ಲಿ ಗುರುವಾರ ಅವಧ್ ವಿ.ವಿ ಘಟಿಕೋತ್ಸವದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್, ‘ಆದಷ್ಟು ಬೇಗ ರಾಮ ಮಂದಿರವನ್ನು ನಿರ್ಮಿಸಲೇಬೇಕು ಎಂಬುದು ಈ ದೇಶದ ನಾಗರಿಕರ ಆಶಯ’ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮಾ, ‘ಅಯೋಧ್ಯೆ ಎಂದರೆ ರಾಮ. ರಾಮ ಈ ದೇಶದ ಆತ್ಮ. ಈ ವಿಚಾರದಲ್ಲಿ ಈಗ ಏನೋ ತಪ್ಪು ಘಟಿಸಿದೆ. ಶಾಸನಬದ್ಧ ಸ್ಥಾನದಲ್ಲಿರುವ ರಾಜ್ಯಪಾಲರು ರಾಮ ಮಂದಿರ ನಿರ್ಮಿಸಬೇಕು ಎಂಬ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಜನರಿಗೆ ಬಿಟ್ಟ ವಿಚಾರ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಗ್ರಾದಲ್ಲಿ ನಡೆದ ಸಾಮೂಹಿಕ ಮತಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಲವಂತದ ಸಾಮೂಹಿಕ ಮತಾಂತರಕ್ಕೆ ದೇಶದಲ್ಲಿ ಅವಕಾಶವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ನಿಚ್ಚಳ. ರಾಜ್ಯ ಸರ್ಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲಿ ನಮ್ಮ ಪಕ್ಷಕ್ಕೇನೂ ಕೆಲಸವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.