ನವದೆಹಲಿ (ಪಿಟಿಐ): ರಾಷ್ಟ್ರಪತಿ ಹುದ್ದೆಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಸೂಕ್ತವಾದ ವ್ಯಕ್ತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
‘ಇಂಡಿಯಾ ಟಿವಿ’ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಜತ್ ಶರ್ಮ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಗಡ್ಕರಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅಡ್ವಾಣಿ ಅವರು ಈ ಹಿಂದೆ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ, ರಾಷ್ಟ್ರಪತಿ ಸ್ಥಾನಕ್ಕೆ ಅಡ್ವಾಣಿ ಸೂಕ್ತ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ.
‘75 ವರ್ಷಕ್ಕಿಂತ ಹಿರಿಯ ಬಿಜೆಪಿ ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಉದಾಹರಣೆಗೆ ಬಾಲಿವುಡ್ನ ಖ್ಯಾತನಟ ಅಮಿತಾಭ್ ಬಚ್ಚನ್ ಅವರು ಈಗ ಹೀರೋ ಆಗಿ ಅಭಿನಯಿಸಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಹೊಸ ತಲೆಮಾರು ಬಂದಿದೆ. ಅಂತೆಯೇ ಇನ್ನೂ ಹತ್ತು ವರ್ಷ ಕಾಲ ಕಳೆದಲ್ಲಿ ನಾನೂ ಕೂಡಾ ನನ್ನ ಈಗಿನ ಸ್ಥಾನಕ್ಕೆ ಹೊಂದಲಾರೆನು’ ಎಂದರು.