ದಾವಣಗೆರೆ: ಪ್ರಯಾಣ ದರದಲ್ಲಿ ರೂ. 55 ಉಳಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಮಂಗಳವಾರ ರಾತ್ರಿ ಎಸ್ಪಿಆರ್ ಟ್ರಾವೆಲ್ಸ್ ಹೆಸರಿನ ಸ್ಲೀಪರ್ ಬಸ್ನಲ್ಲಿ ಬೆಂಗಳೂರಿಗೆ ಹೊರಟಿದ್ದ ಆರು ಮಂದಿ ನತದೃಷ್ಟ ಪ್ರಯಾಣಿಕರು.
ನಿತ್ಯವೂ ಇಲ್ಲಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಪ್ರಯಾಣಕ್ಕಾಗಿ ಮೊದಲ ಆದ್ಯತೆ ನೀಡುವುದು ಖಾಸಗಿ ಟ್ರಾವೆಲ್ಸ್ಗಳಿಗೆ. ಕಾರಣ ಈ ಖಾಸಗಿ ಟ್ರಾವೆಲ್ಸ್ಗಳು ಕೆಎಸ್ಆರ್ಟಿಸಿ ಕೆಂಪು ಬಸ್ಗಳಿಗಿಂತಲೂ ಕಡಿಮೆ ದರಕ್ಕೆ ರಾಜಧಾನಿ ತಲುಪಿಸುವ ಕಾರಣಕ್ಕೆ.
ಕೆಂಪುಬಸ್ಗಳಲ್ಲಿ ಒಬ್ಬರಿಗೆ ಟಿಕೆಟ್ ದರ
ರೂ. 255, ರಾಜಹಂಸ ರೂ. 367 ಹಾಗೂ ಐರಾವತ ರೂ. 443. ಅದೇ ಖಾಸಗಿ ಟ್ರಾವೆಲ್ಸ್ಗಳಲ್ಲಿ ರೂ. 250ರಿಂದ 280 ಮಾತ್ರ. ಈ ದರ ಮೊದಲೇ ಕಾಯ್ದಿರಿಸಿದ ಪ್ರಯಾಣಿಕರಿಗೆ. ಕಾಯ್ದಿರಿಸದೇ ನಿಮ್ಮ ಸಮಯಕ್ಕೆ ಬರುವ ಖಾಲಿ ಬಸ್ಗಳಲ್ಲಾದರೆ ಬರೀ ರೂ. 200 ಮಾತ್ರ!
ಕೆಎಸ್ಆರ್ಟಿಸಿ ಪ್ರಯಾಣಿಕರೇ ಗ್ರಾಹಕರು: ದಾವಣಗೆರೆಯಿಂದ ನಿತ್ಯವೂ ರಾತ್ರಿ ಬೆಂಗಳೂರಿಗೆ 15ರಿಂದ 20 ಖಾಸಗಿ ಬಸ್ಗಳು ಸಂಚರಿಸುತ್ತವೆ. ಅವುಗಳಲ್ಲಿ ಕೆಲವು ಬಸ್ ಮೊದಲೇ ಮುಂಗಡ ಕಾಯ್ದಿರಿಸಿದರೆ, ಇನ್ನೂ ಕೆಲವು ಬಸ್ಗಳಿಗೆ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರೇ ಗ್ರಾಹಕರು.
ಕೆಎಸ್ಆರ್ಟಿಸಿ ನಿಲ್ದಾಣದ ಹೊರಗೆ ನಿಲ್ಲುವ ಇಂತಹ ಬಸ್ಗಳು ಅಲ್ಲಿಗೆ ಬರುವ ಪ್ರಯಾಣಿಕರಿಗೆ ಆಮಿಷವೊಡ್ಡುತ್ತವೆ. ಕೇವಲ ಇನ್ನೂರು ರೂಪಾಯಿ, ಇನ್ನೂರು ರೂಪಾಯಿ ಎಂದು ಕೂಗುವ ಮಧ್ಯವರ್ತಿಗಳ ಆಮಿಷಕ್ಕೆ ಕರಗಿ ರೂ. 55 ಉಳಿಸಲು ಸಾಮಾನ್ಯ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಬೇಕಿದ್ದ ಇಂಥವರು ಖಾಸಗಿ ಬಸ್ಗಳನ್ನು ಏರುತ್ತಾರೆ.
ಎಸ್ಪಿಆರ್ ಟ್ರಾವೆಲ್ಸ್ ಏರಿದವರೂ ಅಂತಹ ಪ್ರಯಾಣಿಕರೇ: ನಗರದಿಂದ ಮಂಗಳವಾರ ಮಧ್ಯರಾತ್ರಿ ಎಸ್ಪಿಆರ್ ಟ್ರಾವೆಲ್ಸ್ ಏರಿದವರೂ ಇಂತಹ ಪ್ರಯಾಣಿಕರೇ. ರಾತ್ರಿ 11 ಗಂಟೆಗೆ ಹರಿಹರದಿಂದ ಹೊರಟ ಈ ಬಸ್ಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯೇ ಹೆಚ್ಚಿನ ಮಂದಿ ಹತ್ತಿದ್ದಾರೆ. ಅವರಲ್ಲಿ ಬಹುತೇಕರು ಸಾಮಾನ್ಯ ವರ್ಗದ ಜನರಾಗಿದ್ದು, ಕನಿಷ್ಠ ಹಣ ಉಳಿಸಲು ಹೋಗಿ ಜೀವ ತೆತ್ತಿದ್ದಾರೆ. ಇಂತಹ ಪ್ರಯಾಣಿಕರು ಮೊದಲೇ ಮುಂಗಡ ಕಾಯ್ದಿರಿಸದ ಕಾರಣ, ಅಪಘಾತಗಳಾದಾಗ ಅವರ ಗುರುತು ಪತ್ತೆ ಹಚ್ಚುವುದು ಕಷ್ಟದ ಕೆಲಸ.
ಇಲ್ಲಿ ಬರೀ ಗೋಲ್ಮಾಲ್: ನಗರದಿಂದ ಬೆಂಗಳೂರಿಗೆ ಪ್ರಯಾಣಿಸುವ ಹಲವು ಬಸ್ಗಳಿಗೆ ನಿತ್ಯವೂ ಇಂತಹ ಕೆಲಸವೇ. ಅನೇಕ
ಬಸ್ಗಳಿಗೆ ಪರ್ಮಿಟ್ ಇರುವುದಿಲ್ಲ. ಕೆಲ ಬಸ್ಗಳು ನಿಯಮದ ಪ್ರಕಾರ ನವೀಕರಣಗೊಂಡಿರುವುದಿಲ್ಲ. ಒಂದು ಬಸ್ಗೆ ಪರ್ಮಿಟ್ ಪಡೆದು, ಎರಡು–ಮೂರು ಬಸ್ಗಳು ಸಂಚರಿಸುವುದು. ಪರ್ಮಿಟ್ ಮುಗಿದರೂ, ನವೀಕರಣ ಮಾಡದೇ ವಂಚಿಸುವುದು. ವಿಮೆ ಇಲ್ಲದೇ ಮಾರ್ಗದಲ್ಲಿ ಬಸ್ ಇಳಿಸುವುದು ಇಲ್ಲಿ ಮಾಮೂಲು.ಕೆಲ ಬಾರಿ ಇಂತಹ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಲಂಚ ಪಡೆದು ಸುಮ್ಮನಾಗುತ್ತಾರೆ ಎನ್ನುವ ಆರೋಪಗಳು ಹೊಸದೇನಲ್ಲ.
ಕ್ರಮ ಕೈಗೊಂಡಿಲ್ಲ
ಕೆಎಸ್ಆರ್ಟಿಸಿ ನಿಲ್ದಾಣದ ಮುಂದೆ ನಿಂತು ಪ್ರಯಾಣಿಕರನ್ನು ಸೆಳೆಯುವ ಖಾಸಗಿ ಟ್ರಾವೆಲ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಆರ್ಟಿಒ ಹಾಗೂ ಪೊಲೀಸರಿಗೆ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಪ್ರವೃತ್ತಿಯಿಂದಾಗಿ ನಮ್ಮ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇನ್ನಾದರೂ ಸಂಬಂಧಿಸಿದವರು ಕಾನೂನು ಕ್ರಮ ಜರುಗಿಸಲಿ.
–ನಿರಂಜನ್,ಕೆಎಸ್ಆರ್ಟಿಸಿ ಕಾರ್ಮಿಕ ಕಲ್ಯಾಣಾಧಿಕಾರಿ
ಆರು ತಿಂಗಳಲ್ಲಿ 4ನೇ ಪ್ರಮುಖ ಬಸ್ ಅಪಘಾತ
*ಚಿತ್ರದುರ್ಗದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಬಸ್ ಅಪಘಾತ ಕಳೆದ ಆರು ತಿಂಗಳ ಅವಧಿಯಲ್ಲಿ ನಾಲ್ಕನೇ ದೊಡ್ಡ ಅಪಘಾತ ಎನಿಸಿತು. ನಾಲ್ಕೂ ಅಪಘಾತ ಸಂಭವಿಸಿದ್ದು ಬೆಳಗಿನ ಜಾವ 2.30 ರಿಂದ 6 ಗಂಟೆ ಅವಧಿಯೊಳಗೆ.
ಅಕ್ಟೋಬರ್ 30, 2013:
*ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟಿದ್ದ ಖಾಸಗಿ ವೋಲ್ವೊ ಬಸ್, ಹೈದರಾಬಾದ್ ಸಮೀಪದ ಮೆಹಬೂಬ್ ನಗರ ಬಳಿ ಬೆಂಕಿಗೆ ಆಹುತಿಯಾಗಿ 45 ಮಂದಿ ಮೃತಪಟ್ಟಿದ್ದರು.
ನವೆಂಬರ್ 14, 2013:
*ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಖಾಸಗಿ ಮಲ್ಟಿ ಆಕ್ಸೆಲ್ ವೋಲ್ವೊ ಬಸ್ ಹಾವೇರಿ ಜಿಲ್ಲೆಯ ಬಂಕಾಪುರ ಕ್ರಾಸ್ ಬಳಿ ಬೆಂಕಿಗೆ ಆಹುತಿಯಾಗಿ ಏಳು ಮಂದಿ ಮೃತಪಟ್ಟಿದ್ದರು.
ಜನವರಿ 20, 2014:
*ತಮಿಳುನಾಡಿನ ನೆಲ್ಲೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ವೋಲ್ವೊ ಬಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಉರುಳಿ ಐವರು ಸಾವಿಗೀಡಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.