ದಾವಣಗೆರೆ: ಸಂಭವನೀಯ ರೈಲು ಅಪಘಾತವೊಂದು ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ನಗರದ ಡಿಸಿಎಂ ಟೌನ್ಶಿಪ್ ಬಳಿ ಭಾನುವಾರ ನಡೆದಿದೆ.
ಆವರೆಗೆರೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್ ಈ ಬಾಲಕ. ಟೌನ್ಶಿಪ್ ಬಳಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಈತ ಹರಿಹರ– ಚಿತ್ರದುರ್ಗ ಪ್ಯಾಸೆಂಜರ್ ರೈಲು ಅತ್ತ ಬರುತ್ತಿದ್ದಂತೆ, ಧರಿಸಿದ್ದ ಕೆಂಪು ಟೀಶರ್ಟ್ ಬಿಚ್ಚಿ ಸಿಗ್ನಲ್ ರೀತಿಯಲ್ಲಿ ಎಂಜಿನ್ ಮುಂದೆ ತೋರಿಸಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ರೈಲು ನಿಲುಗಡೆಯಾಗಿದೆ.
ತಂದೆಯೊಂದಿಗೆ ರೈಲು ಹಳಿ ದಾಟಿ ತೆರಳುತ್ತಿರುವಾಗ ವೆಲ್ಡಿಂಗ್ ಮಾಡಿದ್ದ ಹಳಿ ಬಿರುಕು ಬಿಟ್ಟಿರುವುದನ್ನು 9 ವರ್ಷದ ಸಿದ್ದೇಶ್ ಗಮನಿಸಿದ್ದಾನೆ.
‘ದೂರದಲ್ಲಿ ರೈಲು ಬರುತ್ತಿದ್ದು, ಹಳಿಯಿಂದ ಶಬ್ದ ಬರುತ್ತಿತ್ತು. ನನ್ನ ಮಗ ಸ್ವಲ್ಪ ದೂರ ಓಡಿ ಹೋಗಿ ರೈಲು ನಿಲ್ಲಿಸಿದ. ಘಟನೆಯಿಂದಾಗಿ ರೈಲು ಸುಮಾರು 20 ನಿಮಿಷ ಸ್ಥಳದಲ್ಲಿಯೇ ನಿಂತಿತ್ತು’ ಎಂದು ಬಾಲಕನ ತಂದೆ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.
ರೈಲ್ವೆ ಎಂಜಿನಿಯರ್ಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಹಳಿಯನ್ನು ಸರಿಪಡಿಸಿ ರೈಲು ಚಲಿಸಲು ಅನುಕೂಲ ಮಾಡಿಕೊಟ್ಟರು. ನಂತರ, ಬಿರುಕುಬಿಟ್ಟ ಜಾಗದಲ್ಲಿ ಕಂಬಿ ಬದಲಾಯಿಸಲಾಯಿತು.