ಸಂತ ಕಬೀರ ನಗರ/ಉತ್ತರಪ್ರದೇಶ: ಸರಕು ಸಾಗಣೆ ರೈಲಿಗೆ ಗೋರಖ್ಧಾಮ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಕನಿಷ್ಠ 14 ಪ್ರಯಾಣಿಕರು ಮೃತಪಟ್ಟು, 100 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಸಂತ ಕಬೀರ ನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನೆಯಲ್ಲಿ 40 ಮಂದಿ ಸತ್ತಿದ್ದಾರೆ. ಜಿಲ್ಲೆಯ ಚುರೆಬ್ ರೈಲು ನಿಲ್ದಾಣದ ಸಮೀಪ ಸೋಮವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ.
‘ಗೋರಖ್ಧಾಮ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ, ಗೂಡ್ಸ್ ರೈಲು ಚಲಿಸುತ್ತಿದ್ದ ಮಾರ್ಗದಲ್ಲಿ ಬಂದಿದ್ದೇ ಈ ದುರ್ಘಟನೆಗೆ ಕಾರಣವಾಗಿದ್ದು, ಎಕ್ಸ್ಪ್ರೆಸ್ನ ಮೊದಲ ಬೋಗಿ ಸಂಪೂರ್ಣವಾಗಿ ಹಾನಿಗೊಂಡಿದೆ’ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ‘ಘಟನೆಯಲ್ಲಿ ಎಕ್ಸ್ಪ್ರೆಸ್ನ 2 ಸಾಮಾನ್ಯ ಬೋಗಿ, ಎರಡು ಹವಾನಿಯಂತ್ರಿತ (ಎಸಿ), ಎಸಿ ಮೊದಲ ದರ್ಜೆ ಬೋಗಿ ಸೇರಿದಂತೆ ಒಟ್ಟು ಆರು ಬೋಗಿಗಳು ಗೂಡ್ಸ್ ರೈಲಿಗೆ ಅಪ್ಪಳಿಸಿವೆ’ ಎಂದು ಜಿಲ್ಲಾಧಿಕಾರಿ ಭರತ್ಲಾಲ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಕರ್ತರು ಹಾಗೂ ವೈದ್ಯರ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಹಾರ ಘೋಷಣೆ: ದುರಂತದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ₨ 1 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₨ 50 ಸಾವಿರ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ ₨ 10 ಸಾವಿರ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ.
ತನಿಖೆಗೆ ಆದೇಶ: ಘಟನೆ ಕುರಿತು ತನಿಖೆಗೆ ಆದೇಶಿರುವ ರೈಲ್ವೆ ಮಂಡಳಿ ಮುಖ್ಯಸ್ಥ ಅರುಣೇಂದ್ರ ಕುಮಾರ್, ‘ದುರಂತದಲ್ಲಿ ಸಂಭವಿಸಿರುವ ಸಾವು– ನೋವು ಕುರಿತು ನಿಖರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಹೇಳಿದ್ದಾರೆ. ‘ರೈಲ್ವೆ ಸುರಕ್ಷತಾ ಆಯುಕ್ತ ಪಿ.ಕೆ. ಬಾಜಪೇಯಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದೆ.
ಮೋದಿ ಸಂತಾಪ: ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಘಟನಾ ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಗಾಯಾಳುಗಳಿಗೆ ಸೂಕ್ತ ನೆರವು ದೊರೆಯುವಂತೆ ನೋಡಿಕೊಳ್ಳಲು ಸಂಪುಟ ಕಾರ್ಯದರ್ಶಿ ಅಜೀತ್ ಸೇಠ್ ಅವರಿಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.