ನವದೆಹಲಿ (ಪಿಟಿಐ): ರೈಲ್ವೆ ಇಲಾಖೆಗೆ ಸಂಪೂರ್ಣ ಹೊಸರೂಪ ನೀಡಿ, ಲಾಭ ದತ್ತ ಕೊಂಡೊಯ್ಯಲು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸುಳಿ ವನ್ನು ಕೇಂದ್ರ ಸರ್ಕಾರ ಮಂಗಳವಾರ ನೀಡಿದೆ.
ರೈಲ್ವೆ ಸಮಾವೇಶದಲ್ಲಿ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ, ರೈಲ್ವೆ ಇಲಾಖೆಗೆ ಕಾಯಕಲ್ಪ ಕಲ್ಪಿಸಬೇಕಾದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳು ವುದು ಅನಿವಾರ್ಯ ಎಂದರು. ರೈಲ್ವೆ ಇಲಾಖೆಯನ್ನು ಸದೃಢಗೊಳಿಸುವ ಉದ್ದೇಶ ದಿಂದಲೇ ಕಳೆದ ರೈಲ್ವೆ ಬಜೆಟ್ನಲ್ಲಿ ಉದ್ದೇಶಪೂರ್ವಕವಾಗಿ ಯಾವುದೇ ಜನಪ್ರಿಯ ಯೋಜನೆಗಳನ್ನು ಘೋಷಿಸಿರಲಿಲ್ಲ ಎಂದರು.
ಆರ್ಥಿಕ ತೊಂದರೆಯಲ್ಲಿರುವ ರೈಲ್ವೆ ಇಲಾಖೆಯಲ್ಲಿ ಸುಧಾರಣೆ ತರುವುದು ಪ್ರಧಾನಿ ನರೇಂದ್ರ ಮೋದಿ ಕನಸು. ಆ ಕನಸನ್ನು ನನಸಾಗಿಸುವ ಕಾಲ ಕೂಡಿ ಬಂದಿದೆ ಎಂದರು.
ನಿರ್ದಿಷ್ಟವಾಗಿ ಎಂದಿನಿಂದ ರೈಲ್ವೆ ವ್ಯವಸ್ಥೆ ಮರುರೂಪಿಸುವ ಕಾರ್ಯ ಆರಂಭವಾಗಲಿದೆ ಎಂಬುವುದನ್ನು ಅವರು ಬಹಿರಂಗಪಡಿಸಲಿಲ್ಲ. ಆದರೆ, ಸರ್ಕಾರ ತನ್ನ ಕಾರ್ಯ ಆರಂಭಿಸಿದಾಗ ಅದರ ಪರಿಣಾಮಗಳು ತಾವಾಗಿಯೇ ಗೋಚರಿಸಲಿವೆ ಎಂದು ಹೇಳಿದರು.
‘ರೈಲ್ವೆ ಮಂಡಳಿಗೆ ಕಾಯಕಲ್ಪ ನೀಡಿ ಆದಾಯವನ್ನು ಹೆಚ್ಚಿಸಲು ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲು ಇತ್ತೀಚೆಗೆ ಖ್ಯಾತ ಅರ್ಥಶಾಸ್ತ್ರಜ್ಞ ವಿವೇಕ್ ದೆಬ್ರಾಯ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಿದೆ. ಉಳಿದ ಕ್ಷೇತ್ರಗಳಲ್ಲಾಗುವ ತ್ವರಿತ ಬದಲಾವಣೆ ರೈಲ್ವೆಯಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿರುವ ನಾವು ಇದೀಗ ಆ ಕೆಲಸಕ್ಕೆ ಹೈಹಾಕಿದ್ದೇವೆ’ ಎಂದರು.
ರೈಲ್ವೆಯಲ್ಲಿ ಖಾಸಗಿ ಸಹಭಾಗಿತ್ವ ಕುರಿತು ಪ್ರಸ್ತಾಪಿಸಿದ ಅವರು, ‘ಸರ್ಕಾ ರದ ಉದ್ಯಮಸ್ನೇಹಿ ನೀತಿ ಯನ್ನು ಅನುಸರಿಸುತ್ತಿದೆ ಎಂದಾಕ್ಷಣ ಬಡವರ ವಿರೋಧಿ ಎಂದು ಅರ್ಥೈಸಬೇಕಿಲ್ಲ. ಉದ್ಯಮಗಳ ಒಡನಾಟದಿಂದ ಒಳ್ಳೆಯದೇ ಆಗುತ್ತದೆ’ ಎಂದರು.