ಪಾಟ್ನಾ (ಐಎಎನ್ಎಸ್): ಬುದ್ಧಗಯಾದಿಂದ ನೇಪಾಳಕ್ಕೆ ಕಳಿಸಿರುವ ಪವಿತ್ರ ಬೋಧಿ ಸಸಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲ್ಲಿನ ಲುಂಬಿನಿವನದಲ್ಲಿ ನವೆಂಬರ್ 26ರಂದು ನೆಡಲಿದ್ದಾರೆ.
‘ಬುದ್ಧ ಗಯಾ ದೇವಾಲಯ ವ್ಯವಸ್ಥಾಪನಾ ಸಮಿತಿ (ಬಿಟಿಎಂಸಿ) ವತಿಯಿಂದ ಪವಿತ್ರ ಬೋಧಿ ಸಸಿಯನ್ನು ರಾಜತಾಂತ್ರಿಕ ಅಧಿಕಾರಿ ಕೃಷ್ಣ ಚೈತನ್ಯ ಅವರಿಗೆ ಹಸ್ತಾಂತರಿಸಿದೆ. ಅವರು ಶುಕ್ರವಾರ ಸಂಜೆ ಸಸಿಯನ್ನು ನೇಪಾಳಕ್ಕೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ಬಿಟಿಎಂಸಿ ಸದಸ್ಯ ಕಾರ್ಯದರ್ಶಿ ಎನ್.ದೋರ್ಜಿ ತಿಳಿಸಿದ್ದಾರೆ.
‘ಸಸಿಯನ್ನು ನೇಪಾಳಕ್ಕೆ ಕಳಿಸುವ ಮೊದಲು ದೇವಾಲಯದ ಅರ್ಚಕರು ಸಸಿಗೆ ವಿಶೇಷ ಮಂಗಳ ಪೂಜೆ ಸಲ್ಲಿಸಿದ್ದಾರೆ. ಸಸಿಯು ಚೆನ್ನಾಗಿ ಬೆಳೆಯಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಸಸಿಯು ಆರೋಗ್ಯಕರವಾಗಿದ್ದು ನೆಡಲು ಅರ್ಹವಾಗಿದೆ ಎಂದು ಡೆಹ್ರಾಡೂನ್ ಮೂಲದ ಅರಣ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ.
ಪವಿತ್ರ ಬೋಧಿ ಸಸಿಯನ್ನು ಲುಂಬಿನಿಯ ಮಾಯಾ ದೇವಿ ದೇವಾಲಯದ ಆವರಣದಲ್ಲಿ ನ.26ರಂದು ಪ್ರಧಾನಿ ನರೇಂದ್ರ ಮೋದಿ ನೆಡಲಿದ್ದಾರೆ.
ಈ ಮುನ್ನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರವಾಸದ ವೇಳೆ ಈ ವರ್ಷದ ಸೆಪ್ಟೆಂಬರ್ನಲ್ಲಿ ಪವಿತ್ರ ಬೋಧಿ ಸಸಿಯೊಂದನ್ನು ವಿಯೇಟ್ನಾಂನಲ್ಲಿ ನೆಟ್ಟಿದ್ದಾರೆ.