ಬೆಂಗಳೂರು: ಅಸಾಮರ್ಥ್ಯ ಅಥವಾ ದುರ್ನಡತೆಯ ಆರೋಪ ಎದುರಿಸುತ್ತಿರುವ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣಯ ಮಂಡನೆಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ ಕ್ಷಣದಿಂದ, ಲೋಕಾಯುಕ್ತರು ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ಲೋಕಾಯುಕ್ತ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸಿದೆ.
* ಪದಚ್ಯುತಿ ನಿರ್ಣಯ ಮಂಡನೆಗೆ ಅವಕಾಶ ಕೋರಲು ವಿಧಾನಸಭೆಯ ಮೂರನೆಯ ಒಂದರಷ್ಟು (75 ಜನ) ಸದಸ್ಯರ ಸಹಿ ಬೇಕು.
* ನಿರ್ಣಯ ಸ್ವೀಕರಿಸಿದ ನಂತರ ಲೋಕಾಯುಕ್ತರ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ಸಭಾಧ್ಯಕ್ಷರಿಗೆ ಅನಿಸಿದರೆ ನಿರ್ಣಯ ಒಪ್ಪಬಹುದು.
* ಲೋಕಾಯುಕ್ತರ ವಿರುದ್ಧ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಗೆ ಸಭಾಧ್ಯಕ್ಷರು ತಿಳಿಸಬೇಕು.
* ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಿಸಿದ ಬೇರೆ ನ್ಯಾಯಮೂರ್ತಿ, ಲೋಕಾಯುಕ್ತರ ವಿರುದ್ಧ ಇರುವ ನಿರ್ದಿಷ್ಟ ಆರೋಪಗಳ ಪಟ್ಟಿ ಸಿದ್ಧಪಡಿಸಬೇಕು. ಈ ಪಟ್ಟಿಯನ್ನು ಲೋಕಾಯುಕ್ತರಿಗೆ ನೀಡಬೇಕು. ಆರೋಪಗಳ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ತನಿಖೆ 90 ದಿನಗಳಲ್ಲಿ ಪೂರ್ಣಗೊಳ್ಳಬೇಕು.
* ಲೋಕಾಯುಕ್ತರ ವಿರುದ್ಧದ ಆರೋಪ ನಿಜ ಎಂಬ ವರದಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಭಾಧ್ಯಕ್ಷರಿಗೆ ನೀಡಿದರೆ, ಸಭಾಧ್ಯಕ್ಷರು ಮತಕ್ಕೆ ಹಾಕುತ್ತಾರೆ. ಪದಚ್ಯುತಿ ಪರವಾಗಿ ಮೂರನೆಯ ಎರಡರಷ್ಟು ಮತ ದೊರೆಯಬೇಕು. ಸದನದ ತೀರ್ಮಾನವನ್ನು ರಾಜ್ಯಪಾಲರಿಗೆ ರವಾನಿಸಬೇಕು.
* ಸದನದ ತೀರ್ಮಾನಕ್ಕೆ ರಾಜ್ಯಪಾಲರ ಅಂಕಿತ ದೊರೆತರೆ, ಲೋಕಾಯುಕ್ತರ ಪದಚ್ಯುತಿ ಆದಂತಾಗುತ್ತದೆ ಎಂದು ಮಸೂದೆ ವಿವರಿಸಿದೆ.