ಮೈಸೂರಿನಲ್ಲಿ ಇತ್ತೀಚೆಗೆ ನಿಗದಿಯಾಗಿದ್ದ ಭಗವದ್ಗೀತೆ ಮತ್ತು ರಾಮಾಯಣ ಕುರಿತ ಸಂವಾದದ ಬಗ್ಗೆ ನನ್ನ ಅಭಿಪ್ರಾಯಗಳು: ಪ್ರೊ.ಭಗವಾನ್ ಅವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಇದು, ವಾದ-ವಿತಂಡವಾದೀತೆ ಹೊರತು ಸಂವಾದವಾಗಲು ಸಾಧ್ಯವಿಲ್ಲ. ನಾವು ಧಾರ್ಮಿಕ ಅಸಹಿಷ್ಣುತೆ, ಮೂಲಭೂತ ವಾದಗಳಿಂದ ಸುತ್ತುವರಿದಿದ್ದೇವೆ.
ಭಗವಾನ್ ಅವರು ಮೂಢನಂಬಿಕೆ, ಧಾರ್ಮಿಕ ಅಸಮಾನತೆಗಳ ವಿರುದ್ಧ ಹೋರಾಡಿದವರು. ಅವರ ಲೇಖನಗಳನ್ನು ಪ್ರೀತಿಯಿಂದ ಓದಿದ್ದೇವೆ. ಅವರು ಯಾವುದೇ ಪುಸ್ತಕವನ್ನಾಗಲಿ, ಅದರ ಭಾಗಗಳನ್ನಾಗಲಿ ಸುಡುವ, ಹರಿಯುವ ಮಾತನಾಡಬಾರದು.
ಇತ್ತೀಚೆಗೆ ಟಿ.ವಿ. ವಾಹಿನಿಯಲ್ಲಿ ಭಗವಾನ್ ಅವರನ್ನು ಸಂದರ್ಶಿಸಿದವರು ‘ನಿಮ್ಮ ಹೆಸರಿನಲ್ಲೇ ದೇವರಿದ್ದಾನಲ್ಲ, ಯಾಕೆ?’ ಎಂದು ಕೇಳಿದರು. ಇದಕ್ಕೆ ಭಗವಾನ್ ಅವರು ಸರಿಯಾಗಿ ಉತ್ತರಿಸಲಿಲ್ಲ. ಅದು ‘ನಮ್ಮ ತಾಯಿ ತಂದೆ ಇಟ್ಟಿದ್ದು ಅಷ್ಟೆ’ ಅಂದರು. ಭಗವಾನ್ ಅನ್ನುವ ಹೆಸರು ನಮಗೆ ಹೆಮ್ಮೆಯಾಗಬೇಕು.
ಅದು ದೇವರ ಹೆಸರಲ್ಲ. ಎಲ್ಲ ಆಶೆಗಳನ್ನು, ಸಂಸಾರದ ಸೂತ್ರಗಳನ್ನೂ ಕಡಿದುಕೊಂಡ ಅರಿಹಂತ ಸ್ಥಿತಿ. ಯಾವುದೇ ಕಾರಣವಿರಲಿ, ವಾದವೋ, ಸಂವಾದವೋ ರದ್ದಾದದ್ದು ಒಳ್ಳೆಯದೇ ಆಯಿತು. ವಾದ ಕೂಡ ಒಂದು ಹಿಂಸೆ. ಅದು ಪ್ರತಿಹಿಂಸೆಯನ್ನೇ ಹುಟ್ಟುಹಾಕಬಲ್ಲದು.