ಚಂಡೀಗಡ (ಐಎಎನ್ಎಸ್): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಬಗ್ಗೆ ನಡೆಸುವ ತನಿಖೆಯಲ್ಲಿ ಯಾವುದೇ ದ್ವೇಷ ಸಾಧನೆ ಇಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಎಲ್ಲವೂ ಕಾನೂನು ಪ್ರಕಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಭೂ ವ್ಯವಹಾರಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ವಾದ್ರಾ ಅವರಿಗೆ ಸಂಬಂಧಿಸಿದ ಭೂ ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಭಾನುವಾರ ಅಸ್ತಿತ್ವಕ್ಕೆ ಬಂದ ಹರಿಯಾಣ ಸರ್ಕಾರದ ಸಚಿವರು ಹೇಳಿದ್ದರು.
ಭೂಬಳಕೆಯ ಬದಲಾವಣೆಗೆ ಸಂಬಂಧಿಸಿದ ಹಿಂದಿನ ಭೂಪೀಂದರ್ ಸಿಂಗ್ ಹೂಡಾ ಸರ್ಕಾರದ ನಿರ್ಧಾರಗಳ ಬಗ್ಗೆ ಪ್ರಶ್ನಿಸಿದಾಗಲೂ, ‘ಇಂತಹ ಎಲ್ಲ ದೂರುಗಳಿಗೆ ಸಂಬಂಧಿಸಿಯೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಖಟ್ಟರ್ ಹೇಳಿದರು.
‘ನನ್ನ ಸರ್ಕಾರ ದ್ವೇಷ ಸಾಧನೆಯ ಉದ್ದೇಶದಿಂದ ಕೆಲಸ ಮಾಡುವುದಿಲ್ಲ. ರಾಜ್ಯದ ಜನರ ಸುಧಾರಣೆ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವುದೇ ಸರ್ಕಾರದ ಆದ್ಯತೆ’ ಎಂದು ಅವರು ತಿಳಿಸಿದರು. ಹೂಡಾ ಅವಧಿಯ ಭೂ ಹಗರಣಗಳ ಬಗ್ಗೆ ಬಿಜೆಪಿಯ ಹೊಸ ಸರ್ಕಾರ ಮೃದುವಾಗಿದೆ ಎಂದೇ ಈ ಹೇಳಿಕೆಯನ್ನು ವಿಶ್ಲೇಷಿಸಲಾಗಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಭೂ ಹಗರಣಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿತ್ತು.
ಮಾರ್ಚ್ 2005ರಿಂದ ಅಕ್ಟೋಬರ್ 2014ರ ವರೆಗಿನ ಹೂಡಾ ಸರ್ಕಾರದ ಅವಧಿಯಲ್ಲಿ ವಾದ್ರಾ ಅವರು ಭೂ ವ್ಯವಹಾರಗಳ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.