ಮುಂಬೈ (ಪಿಟಿಐ): ದೇಶದ ಮೊದಲ ವಿಮಾನವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಒಡೆಯುವ ಕೆಲಸ ದಕ್ಷಿಣ ಮುಂಬೈನ ದರುಕಾನ ಯಾರ್ಡ್ನಲ್ಲಿರುವ ಹಡಗು ಒಡೆಯುವ ಕಟ್ಟೆಯಲ್ಲಿ ಗುರುವಾರ ಆರಂಭವಾಗಿದೆ.
ಐಎನ್ಎಸ್ ವಿಕ್ರಾಂತ್ ಅನ್ನು ಒಡೆಯುವುದರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ನಲ್ಲಿ ತಿರಸ್ಕರಿಸಿತ್ತು. ನೌಕೆಯನ್ನು ಒಡೆಯಲು ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಪಡೆಯಲು ಮೂರು ತಿಂಗಳ ಸಮಯ ಹಿಡಿಯಿತು. ಹಡಗನ್ನು ಸಂಪೂರ್ಣವಾಗಿ ಒಡೆಯಲು ಏಳರಿಂದ ಎಂಟು ತಿಂಗಳು ಹಿಡಿಯಬಹುದು ಎಂದು ಹಡಗನ್ನು ಒಡೆಯಲು ಗುತ್ತಿಗೆ ಪಡೆದಿರುವ ಐಬಿ ಕಮರ್ಷಿಯಲ್ನ ಅಬ್ದುಲ್ ಝಾಕಾ ಹೇಳಿದ್ದಾರೆ.
ಐಎನ್ಎಸ್ ವಿಕ್ರಾಂತ್ ಭಾರತದ ಮೊದಲ ವಿಮಾನವಾಹಕ ಯುದ್ಧನೌಕೆ. 1957ರಲ್ಲಿ ಬ್ರಿಟನ್ನಿಂದ ಇದನ್ನು ಖರೀದಿಸಲಾಗಿತ್ತು. 1961ರಿಂದ 1997ರವೆರಗೆ ವಿಕ್ರಾಂತ್ ನೌಕಾಪಡೆಯಲ್ಲಿ ಸೇವೆಯಲ್ಲಿತ್ತು. ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿಕ್ರಾಂತ್ ಅನ್ನು ಒಡೆಯದಂತೆ ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿವರಣೆ ನೀಡಿದ್ದ ರಕ್ಷಣಾ ಸಚಿವಾಲಯ, ನೌಕೆಯ ಜೀವಿತಾವಧಿ ಮುಗಿದಿದೆ ಎಂದಿತ್ತು. ಮಹಾರಾಷ್ಟ್ರ ಸರ್ಕಾರ, ನೌಕೆಯನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿತ್ತು.