ಮಂಡ್ಯ ಜಿಲ್ಲೆಯ ಕಿಕ್ಕೇರಿಯ ಪುರಾತನ ಬ್ರಹ್ಮೇಶ್ವರ ದೇಗುಲದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6 ಅಪೂರ್ವ ಶಿಲಾಬಾಲಿಕೆಗಳ ವಿಗ್ರಹಗಳು ಕಳುವಾಗಿರುವುದು (ಪ್ರ.ವಾ., ಅ. 5) ದುರದೃಷ್ಟಕರ.
ದೇವಾಲಯದ ಒಳ ಪ್ರಾಂಗಣದ ಕಂಬಗಳಿಗೆ ಹೊಂದಿಕೊಂಡಿದ್ದ ಈ ಅಪೂರ್ವ ನಾಟ್ಯಮಾಯೂರಿಯರ ವಿಗ್ರಹಗಳು ಅತ್ಯಂತ ಆಕರ್ಷಕವಾಗಿದ್ದವು. ಬೇಲೂರು, ಹಳೇಬೀಡು ಶಿಲಾಬಾಲಿಕೆಯರಷ್ಟೆ ಮಹತ್ವವುಳ್ಳ, ಸಹಸ್ರಾರು ವರ್ಷಗಳ ಸಂಪತ್ತು ವಿಗ್ರಹ ಕಳ್ಳರ ಪಾಲಾಗಿದೆ. ಉಳಿದ ಐದು ನಾಟ್ಯಮಯೂರಿಯರ ವಿಗ್ರಹಗಳು ಧ್ವಂಸಗೊಂಡಿವೆ.
ರಾಜ್ಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಕಳ್ಳತನ ನಡೆದಿರುವುದು, ಪುರಾತನ ವಿಗ್ರಹ ರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಾರಿ ಹೇಳುತ್ತದೆ. ಈಚೆಗಷ್ಟೇ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಎಲ್ಲೆಡೆ ಜೇಡರ ಬಲೆ ಕಟ್ಟಿ, ದೂಳು ಹಿಡಿದ ವಿಗ್ರಹಗಳು, ದಿನನಿತ್ಯದ ಪೂಜೆಗಿರುವ ಅರ್ಚಕರನ್ನು ಬಿಟ್ಟರೆ, ರಕ್ಷಣೆಗೆಂದು ಭದ್ರತಾ ಸಿಬ್ಬಂದಿಯೂ ಕಾಣಿಸಲಿಲ್ಲ. ಅಮೂಲ್ಯ ಶಿಲಾವಿಗ್ರಹಗಳ ರಕ್ಷಣೆಗೆ ಸಮಗ್ರ ಯೋಜನೆ ರೂಪಿಸಬೇಕು. ಸ್ಥಳೀಯರನ್ನೂ ವಿಶ್ವಾಸಕ್ಕೆ ತಗೆದುಕೊಂಡು, ರಕ್ಷಣೆಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು.