ಬೀದರ್: ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕವು ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಾಂತೀಯ ಮಟ್ಟದ ಎರಡು ದಿನಗಳ ಕೊಕ್ಕೊ ಹಾಗೂ ಕಬಡ್ಡಿ ಕ್ರೀಡಾಕೂಟ ಮಂಗಳವಾರ ತೆರೆ ಕಂಡಿತು.
ಬಾಲ ವರ್ಗ, ಕಿಶೋರ ವರ್ಗ, ತರುಣ ವರ್ಗ ವಿಭಾಗದ ಕೊಕ್ಕೊ ಹಾಗೂ ಕಬಡ್ಡಿ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಗಳಿಸಿರುವ ತಂಡಗಳು ಕೇರಳದಲ್ಲಿ ನಡೆಯಲಿರುವ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿವೆ.
ಕಬಡ್ಡಿ, ಕೊಕ್ಕೊ ದೇಸಿ ಕ್ರೀಡೆಗಳಾಗಿದ್ದು, ಇವುಗಳಿಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅಭಿಪ್ರಾಯಪಟ್ಟರು.
ಪ್ರಾಂತ ಶಾರಿರೀಕ ಶಿಕ್ಷಣ ಪ್ರಮುಖ ವೈಜಿನಾಥ ರೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ.ಭೂಮರೆಡ್ಡಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ.ಎಸ್.ಪಾಟೀಲ, ಪದವಿ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಆರ್.ರೆಡ್ಡಿ, ವಿದ್ಯಾಭಾರತಿ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಇದ್ದರು. ಸ್ವರ್ಣಾ ಟಿ.ಪಿ. ಸ್ವಾಗತಿಸಿ, ಶಶಿಕಲಾ ನಿರೂಪಿಸಿ, ಧನರಾಜ ರೆಡ್ಡಿ ವಂದಿಸಿದರು. ವಿವಿಧ ಜಿಲ್ಲೆಗಳ ವಿದ್ಯಾಭಾರತಿ ಕರ್ನಾಟಕ ಸಂಚಾಲಿತ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.